ADVERTISEMENT

ಅರಿವು ತೋರುವ ಗುರುವಿನ ಸ್ಮರಣೆ

ಗುರು ಪೂರ್ಣಿಮೆ: ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ವಿಶೇಷ ಪೂಜೆ– ಪ್ರವಚನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:07 IST
Last Updated 16 ಜುಲೈ 2019, 19:07 IST
ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ಸಾಯಿಬಾಬಾ ಮೂರ್ತಿಯ ದರ್ಶನ ಪಡೆದ ಭಕ್ತರು ಪ್ರಜಾವಾಣಿ ಚಿತ್ರ
ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ಸಾಯಿಬಾಬಾ ಮೂರ್ತಿಯ ದರ್ಶನ ಪಡೆದ ಭಕ್ತರು ಪ್ರಜಾವಾಣಿ ಚಿತ್ರ   

ಬೆಂಗಳೂರು:ಗುರು ಪೂರ್ಣಿಮೆ ಅಂಗವಾಗಿ ನಗರದ ವಿವಿಧೆಡೆ ಗುರು ಸ್ಮರಣೆ ಕಾರ್ಯಕ್ರಮಗಳು ಮಂಗಳವಾರ ನಡೆದವು. ಮುಖ್ಯವಾಗಿ, ಶಿರಡಿ ಸಾಯಿ ಮಂದಿರಗಳಲ್ಲಿ ವಿಶೇಷ ಪೂಜೆ, ಪ್ರವಚನ ಏರ್ಪಡಿಸಲಾಗಿತ್ತು.

ಬೆಳಿಗ್ಗೆ ಗಣಪತಿ, ದತ್ತಾತ್ರೇಯ ಮೂರ್ತಿಗಳಿಗೆ ಅಭಿಷೇಕ, ಬಾಬಾ ಅವರ ಪಾದುಕೆಗಳಿಗೆ ವಿಶೇಷ ಪೂಜೆ ಮಾಡಲಾಯಿತು. ನಂತರ, ಭಜನೆ, ಪುಷ್ಪಾರ್ಚನೆ ಹಾಗೂ ಆರತಿ ಮಾಡಲಾಯಿತು.ಸಂಜೆ ಪಲ್ಲಕ್ಕಿ ಮೆರವಣಿಗೆ, ರಾತ್ರಿ ಅಖಂಡ ಭಜನೆ ಮತ್ತು ಜಾಗರಣೆ ಮಾಡಲಾಯಿತು.

ನಗರದ ಚಕ್ರವರ್ತಿ ಲೇಔಟ್‌ನಲ್ಲಿರುವ ದತ್ತಗುರು ಸದಾನಂದ ಮಹಾರಾಜರ ಆಶ್ರಮ, ಲಗ್ಗೆರೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ,ಬನ್ನೇರುಘಟ್ಟ ರಸ್ತೆಯ ಶಿರಡಿ ಸಾಯಿ ಲೇಔಟ್ ನಲ್ಲಿರುವ ಸಾಯಿಬಾಬಾ ದೇಗುಲ ಸೇರಿದಂತೆ ಹಲವು ದೇಗುಲ, ಮಠಗಳಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮಗಳು ನಡೆದವು.

ADVERTISEMENT

ಭಕ್ತಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೇಗುಲಗಳನ್ನು ಹೂವುಗಳಿಂದ, ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಹಲವು ದೇಗುಲಗಳಲ್ಲಿಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಆಧ್ಯಾತ್ಮಿಕ ಸಂಪತ್ತು ದೊಡ್ಡದು:‘ಜೀವನದಲ್ಲಿ ಭೌತಿಕ ಸಂಪತ್ತಿಗಿಂತ ಆಧ್ಯಾತ್ಮಿಕ ಸಂಪತ್ತು ಹೆಚ್ಚು ಬೆಲೆಯುಳ್ಳದ್ದು. ಭೌತಿಕ ಸಂಪತ್ತು ಹೇರಳವಾಗಿ ಇದ್ದು ಮಾನಸಿಕ ತೃಪ್ತಿ ಇಲ್ಲದಿದ್ದರೆ ಅದಕ್ಕೆ ಬೆಲೆ ಇಲ್ಲ’ ಎಂದುಸಿದ್ಧಾರೂಢ ಮಿಷನ್ ಅಧ್ಯಕ್ಷ ಆರೂಢ ಭಾರತೀ ಸ್ವಾಮೀಜಿ ಹೇಳಿದರು.

ರಾಮೋಹಳ್ಳಿಯ ಸಿದ್ಧಾರೂಢ ಮಿಷನ್ ಆಶ್ರಮದಲ್ಲಿ ನಡೆದ ಗುರುಪೂರ್ಣಿಮೆ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಾಬಾರ ಮೇಣದ ಪ್ರತಿಮೆ ಆಕರ್ಷಣೆ

ಜೆ.ಪಿ. ನಗರದ 6ನೇ ಹಂತದಲ್ಲಿರುವ ಸತ್ಯಗಣಪತಿ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಸಾಯಿ ಬಾಬಾರ ಮೇಣದ ಪ್ರತಿಮೆ ಕಣ್ಮನ ಸೆಳೆಯಿತು.

‘ಶಿರಡಿ ಸಾಯಿ ಬಾಬಾ ಅವರ ನಿಜರೂಪದ ದರ್ಶನ ನೀಡಲು, ಜೀವ ಕಳೆಯನ್ನು ಹೊಂದಿರುವ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದೇವೆ’ ಎಂದು ದೇಗುಲದ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ರಾಮ್ ಮೋಹನ ರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.