ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರಮಂತ್ರಿಗಳು ನೆರೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಬೀದಿಗೆ ಬಿದ್ದಿರುವ ಬಡ ಕುಟುಂಬಗಳೊಂದಿಗೆ ಕುಳಿತು ಪರಿಹಾರ ಕಾರ್ಯಗಳ ಪರಿಶೀಲನೆ ಮಾಡುವ ಬದಲಿಗೆ 'ಬೆಂಗಳೂರು ನಗರದ ಪರಿವೀಕ್ಷಣೆ' ಎಂಬ ನಾಟಕವಾಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
‘ರಾಜ್ಯದಲ್ಲಿ ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದರೂ ಅವರನ್ನು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಕರೆದೊಯ್ಯಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಕೇಂದ್ರ ಸರ್ಕಾರದಿಂದ ಪರಿಹಾರ ಧನವನ್ನು ಗಟ್ಟಿ ಧ್ವನಿಯಲ್ಲಿ ಕೇಳಲು ಸಾಧ್ಯವಾಗದಷ್ಟು ಮುಖ್ಯಮಂತ್ರಿಗಳು ದುರ್ಬಲರಾಗಿರುವುದು ನಮ್ಮ ರಾಜ್ಯದ ದುರ್ದೈವ’ ಎಂದು ಟೀಕಿಸಿದ್ದಾರೆ.
‘ಚಂದ್ರಯಾನ ವೀಕ್ಷಿಸಲು ಬೆಂಗಳೂರಿಗೆ ಪ್ರಧಾನಿ ಬಂದು ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದು ಸ್ವಾಗತಾರ್ಹ. ಆದರೆ, ನೆರೆಯಿಂದ ತತ್ತರಿಸಿ ಬೀದಿಗೆ ಬಿದ್ದಿರುವ ಸಾವಿರಾರು ಕುಟುಂಬಗಳು, ಮಕ್ಕಳನ್ನು ತಿರುಗಿಯೂ ನೋಡದೆ, ಕೇಂದ್ರದಿಂದ ಯಾವುದೇ ಪರಿಹಾರವನ್ನೂ ಘೋಷಿಸದೆ ಹಾಗೆಯೇ ತೆರಳಿದ್ದು ನೋವಿನ ವಿಚಾರ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.