ಬೆಂಗಳೂರು: ‘ಮಹದೇವಪುರ ಸೇರಿದಂತೆ ನಗರದ ಕೆಲವು ಭಾಗಗಳಲ್ಲಿ ಎಚ್1ಎನ್1 ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಪ್ರಕರಣ ವರದಿಯಾದಾಗ ತ್ವರಿತ ಸ್ಪಂದನೆ ನೀಡಲು ವಿಶೇಷ ತಂಡವನ್ನು ರಚಿಸಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಎಚ್1ಎನ್1 ನಿಯಂತ್ರಣದ ಕುರಿತು ಇಲ್ಲಿ ಭಾನುವಾರ ಸಭೆ ನಡೆಸಿದ ಅವರು, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು ರೋಗಿಗಳು ಎಚ್1ಎನ್1ನಿಂದ ಮೃತಪಟ್ಟಿದ್ದಾರೆ. ರೋಗ ಹಬ್ಬುವುದನ್ನು ತಡೆಗಟ್ಟಲು ವಿಶೇಷ ಎಚ್ಚರಿಕೆ ವಹಿಸಬೇಕು’ ಎಂದು ಅಧಿಕಾರಿ
ಗಳಿಗೆ ಸೂಚನೆಯನ್ನು ನೀಡಿದರು.
**
ಬಿಬಿಎಂಪಿ ಕೈಗೊಂಡಿರುವ ಕ್ರಮ
ತ್ವರಿತ ಸ್ಪಂದನಾ ತಂಡದಲ್ಲಿ ಆರೋಗ್ಯ ಕೇಂದ್ರದ ವೈದ್ಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಇರುತ್ತಾರೆ.ಎಚ್1 ಎನ್1 ಪ್ರಕರಣಗಳು ವರದಿಯಾದ ಮನೆಯ ಸುತ್ತಮುತ್ತಲಿನ 50 ರಿಂದ 60 ಮನೆಗಳಿಗೆ ತಂಡದ ಸದಸ್ಯರು ಭೇಟಿ ನೀಡಲಿದ್ದಾರೆ.
ರೋಗ ಹರಡದಂತೆ ತಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಸಭೆಯಲ್ಲಿ ಮಾಹಿತಿ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಎಚ್1 ಎನ್1 ರೋಗಿಗಳು ದಾಖಲಾದರೆ, ಈ ಬಗ್ಗೆ ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ಮಾಹಿತಿ ಮತ್ತು ಸಾಂಕ್ರಾಮಿಕ ರೋಗ ಘಟಕಕ್ಕೆ (ಪಿಎಚ್ಐ ಇಸಿ) ಮಾಹಿತಿ ನೀಡಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.