ಬೆಂಗಳೂರು: 'ಜಾತ್ಯತೀತ ಭಾರತದಲ್ಲಿ ಇಸ್ಲಾಂ ಅರ್ಥವ್ಯವಸ್ಥೆಗೆ ಚಾಲನೆ ನೀಡುವ ‘ಹಲಾಲ್ ಸರ್ಟಿಫಿಕೇಶನ್’ ಶೇ 80ರಷ್ಟು ಹಿಂದೂಗಳ ಮೇಲೆ ಹೇರಿದ ‘ಜಿಝಿಯಾ ತೆರಿಗೆ’ಯೇ ಆಗಿದೆ. ಅದನ್ನು ರದ್ದುಪಡಿಸಲು ಹಿಂದೂಗಳು ಸಂಘಟಿತರಾಗಬೇಕು’ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿ ಆನ್ಲೈನ್ ಮೂಲಕ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ‘ಹಲಾಲ್ ಸರ್ಟಿಫೀಕೆಟ್’ನಿಂದ ಭಾರತದಲ್ಲಿ ಆರ್ಥಿಕ ಜಿಹಾದ್’ ಕುರಿತು ಅವರು ಮಾತನಾಡಿದರು.
‘ಮುಸಲ್ಮಾನ ಡೆಲಿವರಿ ಬಾಯ್ನಿಂದ ಪಾರ್ಸೆಲ್ ಪಡೆಯಲು ನಿರಾಕರಿಸಿದ್ದ ಹಿಂದೂ ಗ್ರಾಹಕನ ಮೇಲೆ ‘ಅನ್ನಕ್ಕೆ ಧರ್ಮ ಇರುವುದಿಲ್ಲ’ ಎಂದು ಹೇಳುತ್ತಾ ಜಾತ್ಯತೀತವಾದಿಗಳು ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಆದರೆ, ದೇಶದಲ್ಲಿ ಮಾಂಸಾಹಾರವಷ್ಟೇ ಅಲ್ಲದೆ, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ವಸತಿ ಸಮುಚ್ಚಯ, ಡೇಟಿಂಗ್ ಸೈಟ್ ಇತ್ಯಾದಿಗಳಿಗೆ ಇಸ್ಲಾಂ ಕಾನೂನಿನನ್ವಯ ‘ಹಲಾಲ್ ಸರ್ಟಿಫಿಕೇಶನ್’ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಿಂದ ಇಸ್ಲಾಮಿ ಸಂಸ್ಥೆಗಳಿಗೆ ಸಾವಿರಾರು ಕೋಟಿ ಲಾಭ ಸಿಗುತ್ತಿದೆ’ ಎಂದು ರಮೇಶ್ ಶಿಂಧೆ ಹೇಳಿದರು.
ಹಿಂದೂ ಮಕ್ಕಳ ಕಚ್ಚಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಅರ್ಜುನ ಸಂಪತ್, ‘ಪೆರಿಯಾರ್ ಕಾರ್ಯಕರ್ತರು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮ, ಪರಂಪರೆ ಹಾಗೂ ಬ್ರಾಹ್ಮಣ ಸಮಾಜವನ್ನು ಅವಮಾನಿಸಿ, ಹಿಂದೂಗಳನ್ನು ದ್ವೇಷಿಸುತ್ತಿದ್ದಾರೆ’ ಎಂದರು.
ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಶಿವಸೇನೆ ತಮಿಳುನಾಡು ಘಟಕದ ಅಧ್ಯಕ್ಷ ಜಿ. ರಾಧಾಕೃಷ್ಣನ್ ಮತ್ತು ನಿಮಿತ್ತೇಕಮ್ ಸಂಘಟನೆಯ ಅಧ್ಯಕ್ಷೆ ಜಯ ಅಹುಜಾ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.