ADVERTISEMENT

ಪ್ರಾಕೃತ ಭಾಷೆಯ ಸಂಶೋಧನೆ ನಡೆಯುತ್ತಿಲ್ಲ: ಹಂಪನಾ 

ಪ್ರೊ.ಎಚ್‌. ಟಿ. ಪೋತೆ ಅವರ ಕೃತಿಗಳ ಅವಲೋಕನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 19:14 IST
Last Updated 28 ನವೆಂಬರ್ 2022, 19:14 IST
ನಗರದಲ್ಲಿ ಸೋಮವಾರ ನಡೆದ ಪ್ರೊ.ಎಚ್.ಟಿ. ಪೋತೆ ಅವರ ನಾಲ್ಕು ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ  ಡಾ. ಮುದೇನೂರು ನಿಂಗಪ್ಪ, ಸಾಹಿತಿ ಹಂ.ಪ. ನಾಗರಾಜಯ್ಯ, ಪ್ರೊ.ಎಚ್.ಟಿ. ಪೋತೆ,  ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಹಿ.ಚಿ. ಬೋರಲಿಂಗಯ್ಯ ಮತ್ತು ಸಹ ಪ್ರಾಧ್ಯಾಪಕ ಶಿವರಾಜ ಬ್ಯಾಡರಹಳ್ಳಿ ಭಾಗವಹಿಸಿದ್ದರು  – ಪ್ರಜಾವಾಣಿ ಚಿತ್ರ.
ನಗರದಲ್ಲಿ ಸೋಮವಾರ ನಡೆದ ಪ್ರೊ.ಎಚ್.ಟಿ. ಪೋತೆ ಅವರ ನಾಲ್ಕು ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ  ಡಾ. ಮುದೇನೂರು ನಿಂಗಪ್ಪ, ಸಾಹಿತಿ ಹಂ.ಪ. ನಾಗರಾಜಯ್ಯ, ಪ್ರೊ.ಎಚ್.ಟಿ. ಪೋತೆ,  ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಹಿ.ಚಿ. ಬೋರಲಿಂಗಯ್ಯ ಮತ್ತು ಸಹ ಪ್ರಾಧ್ಯಾಪಕ ಶಿವರಾಜ ಬ್ಯಾಡರಹಳ್ಳಿ ಭಾಗವಹಿಸಿದ್ದರು  – ಪ್ರಜಾವಾಣಿ ಚಿತ್ರ.   

ಬೆಂಗಳೂರು: ಸಂಸ್ಕೃತದಷ್ಟೇ ಪ್ರಾಚೀನವಾದ ಪ್ರಾಕೃತ ಮತ್ತು ಪಾಲಿ ಭಾಷೆಯ ಬಗ್ಗೆ ಸಂಶೋಧನೆಗಳು ನಡೆಯುತ್ತಿಲ್ಲ' ಎಂದು ಸಾಹಿತಿ ಹಂ.ಪ. ನಾಗರಾಜಯ್ಯಬೇಸರ ವ್ಯಕ್ತಪಡಿಸಿದರು.

ಸಪ್ನ ಬುಕ್ ಹೌಸ್, ಕನ್ನಡ ಜನಶಕ್ತಿ ಕೇಂದ್ರ ಹಾಗೂ ಪ್ರೊ.ಮಲ್ಲೇಪುರಂ ಸಾಂಸ್ಕೃತಿಕಪ್ರತಿಷ್ಠಾನದ ಸಹಯೋಗದಲ್ಲಿ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಪ್ರೊ.ಎಚ್‌.ಟಿ. ಪೋತೆ ಅವರ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ‘ಅಂಬೇಡ್ಕರ್‌ ಭಾರತ, ಸಮಾಜೋಜಾನಪದ, ಜಾನಪದ ಜ್ಞಾನ ವಿಜ್ಞಾನ, ಬಯಲೆಂಬೊ ಬಯಲು’ ಕೃತಿಗಳಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಾಚೀನ ಭಾಷೆಗಳಾದ ಪ್ರಾಕೃತ ಹಾಗೂ ಪಾಲಿ ಭಾಷೆಗಳು ಕಷ್ಟವಾಗಿರುವುದರಿಂದ ಸಂಶೋಧನೆ ಕೈಗೊಳ್ಳಲು ಯಾರು ಮುಂದೆ ಬರುತ್ತಿಲ್ಲ’ ಎಂದರು.

ADVERTISEMENT

‘ಪ್ರೊ. ಎಚ್.ಟಿ. ಪೋತೆ ಅವರು ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಬರೆದಿದ್ದಾರೆ. ಪೋತೆ ಅವರ ಕೃತಿಗಳು ಬಹುಮುಖಿ ಚಿಂತನೆಗಳನ್ನು ವಿಸ್ತರಿಸಿವೆ. ಈ ನಾಲ್ಕು ಕೃತಿಗಳು ಅನನ್ಯ’ ಎಂದು ವಿವರಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು, ‘ಬುದ್ಧ, ಅಂಬೇಡ್ಕರ ಅವರ ಆದರ್ಶದ ಬದುಕು ಪೋತೆ ಅವರ ಕೃತಿಗಳಲ್ಲಿ ಅನಾವರಣಗೊಂಡಿದೆ’ ಎಂದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಮುದೇನೂರು ನಿಂಗಪ್ಪ ಮಾತನಾಡಿ,‘ಸೃಜನಶೀಲ ಕೃತಿ ನಮ್ಮ ನಡುವೆ ಕನಿಷ್ಠವೆಂದರೂ ಹತ್ತು ವರ್ಷಗಳ ಕಾಲ ಬಾಳಬೇಕು. ತನ್ನ ಚರ್ಚೆ, ಸಂವಾದ, ಮಾತುಗಳ ವಿವೇಕದಿಂದ ನಮ್ಮನ್ನು ಬಾಳಿಸುವ, ಲೇಖಕನನ್ನೂ ಬಾಳಿಸುವ ಸಹೃದಯ ಗುಣ ಕೃತಿಗಿರಬೇಕು. ಅಂತಹ ಗುಣ ಮತ್ತು ವೈಚಾರಿಕ ವಿವೇಕ 'ಬಯಲೆಂಬೊ ಬಯಲು' ಕಾದಂಬರಿಗಿದೆ’ ಎಂದು ವಿವರಿಸಿದರು.

ಸಾಹಿತಿ ಮಲ್ಲೇಪುರಂ ವೆಂಕಟೇಶ್, ಎಚ್.ಟಿ. ಪೋತೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.