ಬೆಂಗಳೂರು: ವಿಶ್ವಪಾರಂಪರಿಕ ಪ್ರವಾಸಿ ತಾಣಗಳ ಪಟ್ಟಿಯಿಂದ ಹಂಪಿಯನ್ನು ಕೈಬಿಟ್ಟು, ಯುನೆಸ್ಕೊ ಅದನ್ನು ಧಾರ್ಮಿಕ ಕೇಂದ್ರವನ್ನಾಗಿ ಘೋಷಿಸಬೇಕು. ಅದನ್ನು ‘ಹಾಳು ಹಂಪಿ’ ಎನ್ನುವ ಬದಲು ‘ಉಳಿದ ಹಂಪಿ’ ಎಂದು ಕರೆಯಬೇಕು ಎಂದು ಭಾರತ ಪುನರುತ್ಥಾನ ಟ್ರಸ್ಟ್ ಆಗ್ರಹಿಸಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಸಂಶೋಧಕಿ ವಸುಂಧರಾ ದೇಸಾಯಿ,‘ಹಂಪಿ ಒಂದು ಧಾರ್ಮಿಕ ಕೇಂದ್ರವಾಗಿದ್ದು, ಪ್ರವಾಸಿ ತಾಣವಲ್ಲ. ಈ ಬಗ್ಗೆ ಹಂಪಿಯಲ್ಲಿ ಸತತ 12 ವರ್ಷ ಸಂಶೋಧನೆ ಕೈಗೊಳ್ಳಲಾಗಿದೆ. ಅಲ್ಲಿದ್ದ ಪುರಾತನ ವಿಗ್ರಹಗಳನ್ನು ಸಂರಕ್ಷಣೆ ಮಾಡಲಾಗಿದೆ. ಅವುಗಳನ್ನು ಮತ್ತೆ ಅದೇ ಜಾಗದಲ್ಲಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳನ್ನು ಆರಂಭಿಸಬೇಕು’ ಎಂದು ಒತ್ತಾಯಿಸಿದರು.
‘ವಿಗ್ರಹಚೋರರಿಂದ ರಕ್ಷಿಸಲುಹಂಪಿಯ ಹಲವು ವಿಗ್ರಹಗಳನ್ನು ಹೂವಿನ ಹಡಗಲಿ ಸಮೀಪದ ರಂಗಾಪುರದಲ್ಲಿ ಸಂರಕ್ಷಿಸಿ ಇಡಲಾಗಿದೆ. ಈ ಎಲ್ಲ ಮಾಹಿತಿಗಳು ಪ್ರತಿಷ್ಠಿತ ಇತಿಹಾಸ ಸಂಕಲನಗಳಲ್ಲಿ ಪ್ರಕಟವಾಗಿದೆ. ಈ ಕುರಿತು ‘ಉಳಿದ ಹಂಪಿ ಮತ್ತು ಗುರುಬಿಷ್ಟಪ್ಪಯ್ಯನವರು’ ಎಂಬ ಪುಸ್ತಕವೂ ಹೊರಬಂದಿದೆ ಎಂದು ಮಾಹಿತಿ ನೀಡಿದರು.
ಟ್ರಸ್ಟ್ನ ಅಧ್ಯಕ್ಷೆ ಶಕುಂತಲಾ ಅಯ್ಯರ್, ಉಪಾಧ್ಯಕ್ಷ ಭಾರದ್ವಾಜ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.