ADVERTISEMENT

ಸಿ.ಎಂ, ಸಚಿವರ ನಿರ್ಗಮನ: ಅಂಗವಿಕಲರ ಅಸಮಾಧಾನ

handicaptes

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 20:21 IST
Last Updated 4 ಡಿಸೆಂಬರ್ 2022, 20:21 IST
ಗಣ್ಯರ ಅನುಪಸ್ಥಿತಿಯಲ್ಲಿ ವಿಶೇಷ ಚೇತನ ಮಕ್ಕಳು ಮಲ್ಲಕಂಬ ಪ್ರದರ್ಶಿಸಿದರು 
ಗಣ್ಯರ ಅನುಪಸ್ಥಿತಿಯಲ್ಲಿ ವಿಶೇಷ ಚೇತನ ಮಕ್ಕಳು ಮಲ್ಲಕಂಬ ಪ್ರದರ್ಶಿಸಿದರು    

ಬೆಂಗಳೂರು: ‘ರಾಜಕೀಯ ಕಾರ್ಯಕ್ರಮಗಳಲ್ಲಿ ತಾಸುಗಟ್ಟಲೆ ಕಾಲಹರಣ ಮಾಡುವ ನಾಯಕರಿಗೆ ಅಂಗವಿಕಲರ ಕಾರ್ಯಕ್ರಮದಲ್ಲಿ ಆಸಕ್ತಿ ಇಲ್ಲದಿರುವುದು ವಿಪರ್ಯಾಸ’ ಎಂದು ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಗಣ್ಯರು ಬೇಗ ನಿರ್ಗಮಿಸಿದ್ದಕ್ಕೆ ಅಂಗವಿಕಲರು ಹಾಗೂ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಸದಸ್ಯರು ಅತೃಪ್ತಿ ಹೊರಹಾಕಿದ್ದಾರೆ.

‘ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರ ಹೆಸರು ನಮೂದಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಭಾಷಣ ಮುಗಿಸಿ ನಂತರ ತರಾತುರಿಯಲ್ಲಿ ದೀಪ ಹಚ್ಚಿ ನಿರ್ಗಮಿಸಿದ ಮುಖ್ಯಮಂತ್ರಿ ಅವರೊಂದಿಗೇ ಸಂಸದ ಪಿ.ಸಿ.ಮೋಹನ್, ಸಚಿವ ಆರ್.ಅಶೋಕ ಅವರು ಸಹ ಹೊರಟರು. ಅದಾದಮೇಲೆ ಶಾಸಕ ರಿಜ್ವಾನ್‌ ಅರ್ಷದ್‌ ಅವರೂ ನಿರ್ಗಮಿಸಿದರು’ ಎಂದು ದೂರಿದ್ದಾರೆ.

ADVERTISEMENT

ಮುಖ್ಯಮಂತ್ರಿ ಅವರಿಂದ ಪ್ರಶಸ್ತಿ ಸ್ವೀಕರಿಸುವ ನಿರೀಕ್ಷೆಯಲ್ಲಿದ್ದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ಸಚಿವ ಹಾಲಪ್ಪ ಆಚಾರ್, ಇಲಾಖಾ ಕಾರ್ಯದರ್ಶಿ, ನಿರ್ದೇಶಕರು. ಪ್ರಶಸ್ತಿ ಪ್ರದಾನದ ನಂತರ ಇಲಾಖಾ ಸಚಿವರೂ ನಿರ್ಗಮಿಸಿದರು. ಗಣ್ಯರಿಲ್ಲದ ಖಾಲಿ ಕುರ್ಚಿಗಳ ವೇದಿಕೆ ಎದುರು ಅಂಗವಿಕಲ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು’ ಎಂದು ತಿಳಿಸಿದ್ದಾರೆ.

‘ವರ್ಷಕ್ಕೆ ಒಮ್ಮೆ ಆಚರಿಸಲಾಗುವ ವಿಶ್ವ ಅಂಗವಿಕಲರ ದಿನಾಚರಣೆಗೆ ಒಂದು ದಿನ ತಾಳ್ಮೆಯಿಂದ ತೊಡಗಿಸಿಕೊಳ್ಳಲಾಗದ ನಾಯಕರಿಂದ ಅಂಗವಿಕಲರ ಸಬಲೀಕರಣ ಸಾಧ್ಯವೇ’ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.