ಬೆಂಗಳೂರು: ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಅವರು ಹನ್ನೊಂದನೇ ಬಾರಿಗೆ ಪುನರಾಯ್ಕೆ ಆಗಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಮಹಾಸಭೆಯ 82ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಮಹಾಸಭಾದ ಉಪಾಧ್ಯಕ್ಷರಾಗಿ ಆರ್.ಎಂ.ಹೆಗಡೆ ಬಾಳೆಸರ, ಶ್ರೀಧರ ಜೆ. ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ವೇಣುವಿಘ್ನೇಶ ಸಂಪ, ಕಾರ್ಯದರ್ಶಿಗಳಾಗಿ ಪ್ರಶಾಂತ ಕುಮಾರ ಜಿ. ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್. ಭಟ್ ಯಲಹಂಕ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಮಾತನಾಡಿದ ಡಾ.ಕಜೆ, ‘ನಾಡಿನ ವಿವಿಧ ಪ್ರಾಂತ್ಯಗಳಲ್ಲಿ ಸಂಸ್ಕಾರೋತ್ಸವವನ್ನು ಆಯೋಜಿಸಲಾಗುವುದು. ಹವ್ಯಕರು ಹೆಚ್ಚಿರುವ ಶಿವಮೊಗ್ಗ, ಉತ್ತರಕನ್ನಡ, ದಕ್ಷಿಣಕನ್ನಡ, ಕೊಡಗು ಮತ್ತು ಕಾಸರಗೋಡು ಭಾಗದಲ್ಲಿ ಸಂಘಟನೆಯನ್ನು ಬಲಪಡಿಸಬೇಕಿದೆ. ಇದಕ್ಕಾಗಿ ಸಿದ್ದಾಪುರ, ಶಿರಸಿ ಮುಂತಾದ ಪ್ರದೇಶದಲ್ಲಿ ಮಹಾಸಭೆಯ ಪ್ರಾದೇಶಿಕ ಕೇಂದ್ರ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದರು.
‘ಬೆಂಗಳೂರಲ್ಲಿ ಆಯೋಜನೆಗೊಂಡಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಯಶಸ್ವಿಯಾಗಿದೆ. ಸಮ್ಮೇಳನದ ಕುರಿತಾಗಿ ಪ್ರತಿಕ್ರಿಯೆ ಇಂದಿಗೂ ವ್ಯಕ್ತವಾಗುತ್ತಿದೆ. ಬೇರೆ ಸಮಾಜದವರೂ ನಮ್ಮ ಸಮಾಜದ ಕಾರ್ಯಕ್ಕೆ ಅಯಾಚಿತವಾಗಿ ಸಹಕಾರ ನೀಡುತ್ತಿದ್ದಾರೆ. ಮಹಾಸಭೆಯ ಸಮಾಜೋತ್ಥಾನದ ಕಾರ್ಯಗಳನ್ನು ನಾಡಿನ ಬೇರೆ ಬೇರೆ ಜನರೂ ಗುರುತಿಸುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.