ADVERTISEMENT

ಮೆಟ್ರೊ: ಚರ್ಚ್ ವಿರುದ್ಧದ ಪ್ರಕ್ರಿಯೆಗಳಿಗೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 4:33 IST
Last Updated 11 ಅಕ್ಟೋಬರ್ 2020, 4:33 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ(ಬಿಎಂಆರ್‌ಸಿಎಲ್‌) ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿದ ಚರ್ಚ್ ಆಫ್ ಸೌತ್ ಇಂಡಿಯಾ ಟ್ರಸ್ಟ್ ಅಸೋಸಿಯೇಷನ್ (ಸಿಎಸ್‌ಐಟಿಎ) ವಿರುದ್ಧದ ಎಲ್ಲಾ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆ ನೀಡಿದೆ.

‘ರಕ್ಷಣಾ ಇಲಾಖೆಯ ಈ ಜಾಗವನ್ನು ಚರ್ಚ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಅದರಲ್ಲಿ 7,426 ಚದರ ಮೀಟರ್‌ ಜಾಗವನ್ನು ಸಿಎಸ್‌ಐಟಿಎ ಅಕ್ರಮವಾಗಿ ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿ ಪರಿಹಾರ ಮೊತ್ತ ಪಡೆದಿದೆ’ ಎಂದು ಆರೋಪಿಸಿ ಅಶೋಕ್‌ನಗರ ಪೊಲೀಸ್‌ ಠಾಣೆಗೆರಕ್ಷಣಾ ಇಲಾಖೆ ದೂರು ನೀಡಿತ್ತು. ಅದನ್ನು ಆಧರಿಸಿ ಜಾರಿ ನಿರ್ದೇಶನಾಲಯವು(ಇ.ಡಿ) ಚರ್ಚ್ ಖಾತೆಯಲ್ಲಿದ್ದ ₹59.29 ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಚರ್ಚ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ, ‘1884ರಲ್ಲಿ ಮೈಸೂರು ಮಹಾರಾಜರು ಚರ್ಚ್‌ಗೆ ಭೂಮಿ ನೀಡಿದ್ದಾರೆ. ನಂತರ ಬಿಷಪ್ ಅವರು ಆಸ್ತಿಯ ಮಾಲೀಕತ್ವದ ಹಕ್ಕು ಚಲಾಯಿಸುತ್ತಿದ್ದಾರೆ. ಈ ಹಿಂದೆ ಜಲಮಂಡಳಿಗೂ ಸ್ವಲ್ಪ ಜಮೀನು ಹಸ್ತಾಂತರಿಸಲಾಗಿದ್ದು, ಆಗ ರಕ್ಷಣಾ ಇಲಾಖೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ’ ಎಂದರು.

ADVERTISEMENT

ಭೂ ಮಂಜೂರಾತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಅಶೋಕ್‌ ನಗರ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಇ.ಡಿ ದಾಖಲಿಸಿರುವ ಇಸಿಐಆರ್‌ಗೆ ತಡೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.