ಬೆಂಗಳೂರು:'ಸಿದ್ದರಾಮಯ್ಯ ಜೆಡಿಎಸ್ನಲ್ಲಿ ಇದ್ದಾಗಲೂ ಅವರ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಿಷ ಕಾರುತ್ತಿದ್ದರು' ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಯಾರನ್ನೂ ರಾಜಕೀಯವಾಗಿ ಮುಗಿಸಿಲ್ಲ. ಜಾಫರ್ ಷರೀಫ್ ಅವರ ಮೊಮ್ಮಗನನ್ನು ರಾಜಕೀಯವಾಗಿ ಮುಗಿಸಿದ್ದೇ ಕುಮಾರಸ್ವಾಮಿ. ಭೈರತಿ ಸುರೇಶ್ಗೆ ಮತ ಹಾಕಿಸಲು ಎಷ್ಟಕ್ಕೆ ಡೀಲ್ ಮಾಡಿದ್ದೀರಿ’ ಎಂದು ಕುಮಾರಸ್ವಾಮಿಯನ್ನು ಪ್ರಶ್ನಿಸಿದರು.
‘ಸ್ವಂತ ಅಣ್ಣ ಎಚ್.ಡಿ.ರೇವಣ್ಣ ಅವರನ್ನೇ ಕುಮಾರಸ್ವಾಮಿ ಸಹಿಸಿಕೊಳ್ಳಲಿಲ್ಲ. ಯಡಿಯೂರಪ್ಪ ಅವರಿಗೆ ಅಧಿಕಾರ ಬಿಟ್ಟುಕೊಟ್ಟರೆ ರೇವಣ್ಣ ಉಪಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕೆ ಜೆಡಿಎಸ್– ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ಕೊಡಲಿಲ್ಲ. ಎಚ್.ಡಿ. ದೇವೇಗೌಡ ನಿಜವಾದ ಜಾತ್ಯತೀತ ನಾಯಕ. ಅವರಿಗ ಹೋಲಿಸಿದರೆ ಎಚ್.ಡಿ. ಕುಮಾರಸ್ವಾಮಿ ಶೇ 1ರಷ್ಟೂ ಇಲ್ಲ’ ಎಂದು ವ್ಯಂಗ್ಯವಾಡಿದರು.
‘ಜೆಡಿಎಸ್ನಲ್ಲಿ ಇದ್ದಾಗ ನಾನೂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದೆ. ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ನನಗೆ ಹಜ್ ಖಾತೆ ಕೊಟ್ಟಿದ್ದರು. ಕುಮಾರಸ್ವಾಮಿ ನನ್ನ ಯೋಗ್ಯತೆಯನ್ನು ಅಳೆದಿದ್ದ ರೀತಿ ಹಾಗಿತ್ತು. ನಾನು ಕಾಂಗ್ರೆಸ್ಗೆ ಬಂದ ತಕ್ಷಣ ನನಗೆ ಆಹಾರ ಖಾತೆ ಕೊಟ್ಟರು. ನನ್ನನ್ನು ಮುಗಿಸಬೇಕು ಅಂದುಕೊಂಡಿದ್ದರೆ, ಸಿದ್ದರಾಮಯ್ಯ ನನಗೆ ಆಹಾರ ಖಾತೆ ಕೊಡಿಸುತ್ತಿರಲಿಲ್ಲ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.