
ನಮ್ಮ ಮೆಟ್ರೊ
ಬೆಂಗಳೂರು: ನಮ್ಮ ಮೆಟ್ರೊ ರೈಲಿನಲ್ಲಿ ಶ್ವಾಸಕೋಶ ಮತ್ತು ಹೃದಯವನ್ನು ಗುರುವಾರ ಸಾಗಿಸಲಾಗಿದೆ.
ದಾನವಾಗಿ ಪಡೆಯಲಾಗಿದ್ದ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರ ಶ್ವಾಸಕೋಶ ಮತ್ತು ಹೃದಯವನ್ನು ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಸಾಗಿಸಬೇಕಿತ್ತು. ಬೆಳಿಗ್ಗೆ 9.34ಕ್ಕೆ ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದಿಂದ ಹೃದಯದ ಪೆಟ್ಟಿಗೆ ಹೊತ್ತ ತಂಡ, 17 ನಿಲ್ದಾಣಗಳನ್ನು ದಾಟಿ 10.15ಕ್ಕೆ ಬನಶಂಕರಿ ಮೆಟ್ರೊ ನಿಲ್ದಾಣಕ್ಕೆ ತಲುಪಿತು. ಹೃದಯವನ್ನು ಅಲ್ಲಿಂದ ಆಂಬುಲೆನ್ಸ್ ಮೂಲಕ ಆಸ್ಟರ್ ಆರ್ವಿ ಆಸ್ಪತ್ರೆಗೆ ಸಾಗಿಸಲಾಯಿತು.
ಶ್ವಾಸಕೋಶದ ಪೆಟ್ಟಿಗೆ ಹೊತ್ತ ತಂಡವು 10.05ಕ್ಕೆ ಗೊರಗುಂಟೆಪಾಳ್ಯದಿಂದ ನಾರಾಯಣ ಹೆಲ್ತ್ ಸಿಟಿಗೆ ಹೊರಟಿತು. ಸುಮಾರು 33 ಕಿ.ಮೀ. ದೂರವನ್ನು 68 ನಿಮಿಷಗಳಲ್ಲಿ ಕ್ರಮಿಸಿ ಶ್ವಾಸಕೋಶವನ್ನು ತಲುಪಿಸಲಾಯಿತು. ಮಧ್ಯೆ 31 ನಿಲ್ದಾಣಗಳನ್ನು ದಾಟಲಾಗಿತ್ತು. ಬೊಮ್ಮಸಂದ್ರ ಮೆಟ್ರೊ ನಿಲ್ದಾಣದಿಂದ ನಾರಾಯಣ ಹೆಲ್ತ್ ಸಿಟಿಗೆ ಆಂಬುಲೆನ್ಸ್ ಮೂಲಕ ಅಂಗಾಂಗ ಸಾಗಿಸಲಾಯಿತು.
ಆಸ್ಪತ್ರೆಗಳಿಗೆ ತ್ವರಿತವಾಗಿ ಹಾಗೂ ಸುರಕ್ಷಿತವಾಗಿ ತಲುಪಿಸುವಲ್ಲಿ ಸಹಕರಿಸಿದ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಮತ್ತು ಬಿಎಂಆರ್ಸಿಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ಆಡಳಿತ ಮಂಡಳಿ ಅಭಿನಂದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.