ಬೆಂಗಳೂರು: ನಗರದ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಜೋರು ಮಳೆ ಸುರಿಯಿತು. ಅಲ್ಲಲ್ಲಿ ಗುಡುಗು– ಸಿಡಿಲಿನ ಅಬ್ಬರವೂ ಇತ್ತು.
ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ಹಾಗೂ ಚಳಿ ವಾತಾವರಣವಿತ್ತು. ಸಂಜೆ 5ರ ನಂತರ ಹಲವೆಡೆ ಜಿಟಿ ಜಿಟಿಯಾಗಿ ಮಳೆ ಸುರಿಯಲಾರಂಭಿಸಿತು. ಕೆಲ ನಿಮಿಷಗಳಲ್ಲೇ ಮಳೆ ಜೋರಾಗಿ ಸುರಿದು, ರಸ್ತೆಯಲ್ಲೇ ನೀರು ಹರಿಯುವಂತಾಯಿತು.
ಮೆಜೆಸ್ಟಿಕ್, ಗಾಂಧಿನಗರ, ಕಾರ್ಪೋರೇಷನ್ ವೃತ್ತ, ಚಾಮರಾಜಪೇಟೆ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ವಿದ್ಯಾರಣ್ಯಪುರ, ಬಿಇಎಲ್ ವೃತ್ತ, ಗೊರಗುಂಟೆಪಾಳ್ಯ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ಬನಶಂಕರಿ, ಕತ್ರಿಗುಪ್ಪೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಅಬ್ಬರ ಜೋರಾಗಿತ್ತು.
ಪ್ರಮುಖ ರಸ್ತೆಗಳಲ್ಲಿ ಎರಡು ಅಡಿಯಷ್ಟು ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ನೀರಿನಲ್ಲೇ ಕೆಟ್ಟು ನಿಂತವು.
ಸಂಜೆ ಕೆಲಸ ಮುಗಿಸಿ ಬಹುತೇಕರು ಮನೆಯತ್ತ ಹೊರಟಿದ್ದರು. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನಗಳು ನಿಧಾನವಾಗಿ ಸಂಚರಿಸಿದವು. ಮೆಜೆಸ್ಟಿಕ್, ಯಶವಂತಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆಯೂ ಉಂಟಾಯಿತು.
‘ನಗರದ ಬಹುತೇಕ ಕಡೆ ಮಳೆ ಆಗಿದೆ. ರಸ್ತೆಯಲ್ಲಿ ನೀರು ನಿಂತಿದ್ದ ದೂರುಗಳು ಬಿಟ್ಟರೆ, ಬೇರೆ ಯಾವ ದೂರುಗಳು ಬಂದಿಲ್ಲ. ಅಂಥ ಕಡೆಗಳಲ್ಲಿ ಸಿಬ್ಬಂದಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ನೀರು ಮುಂದಕ್ಕೆ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.