ಹೆಸರಘಟ್ಟ: ದಾಸನಪುರ ಹೋಬಳಿ ಗೋಪಾಲಪುರ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಗೆ ಡೆಂಗಿ ಹರಡುವ ಕ್ರಮ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ವೈದ್ಯರು ಮಾಹಿತಿ ನೀಡಿದರು.
‘ಬಳಕೆ ಮಾಡಿ ಬಿಸಾಕಿದ ಪ್ಲಾಸ್ಟಿಕ್ ಕವರಿನಲ್ಲಿ ಮಳೆಯ ನೀರು ತುಂಬಿ ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಡೆಂಗಿ ಜ್ವರ ವಿಪರೀತವಾಗಿ ಹಬ್ಬುತ್ತಿದೆ. ಪ್ಲಾಸ್ಟಿಕ್ ಬಳಸಿದ ನಂತರ ಅದನ್ನು ವೈಜ್ಞಾನಿಕವಾಗಿ ನಾಶ ಮಾಡಬೇಕಿದೆ’ ಎಂದು ಗೋಪಾಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದರು.
‘ಬಳಸಿದ ಪ್ಲಾಸ್ಟಿಕ್ ಕವರುಗಳನ್ನು ಮಣ್ಣಿನಲ್ಲಿ ಹೂಳಬೇಕು. ಇಲ್ಲವೇ ಅವುಗಳಿಗೆ ನೀರು ತುಂಬದಂತೆ ಹರಿದು ಹಾಕಿ ಹೊರಗೆ ಬಿಸಾಕಬೇಕು’ ಎಂದು ಅವರು ಸಲಹೆ ನೀಡಿದರು.
‘ಮಾದನಾಯಕನಹಳ್ಳಿ ಗ್ರಾಮದಲ್ಲಿರುವ ನಾಡಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ. ದಿನವಿಡೀ ನಿಂತರೂ ಕೆಲಸಗಳು ಆಗುವುದಿಲ್ಲ. ಅದೇ ಮಧ್ಯವರ್ತಿಗಳ ಮೂಲಕ ಹೋದರೆ ಹತ್ತು ನಿಮಿಷಗಳಲ್ಲೇ ಕೆಲಸವಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಗೋಪಾಲ್ ದೂರಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ರವಿಕುಮಾರ್ ಮಧ್ಯ ಪ್ರವೇಶಿಸಿ, ಮಧ್ಯವರ್ತಿಗಳ ಹಾವಳಿ ತಡೆಯದಿದ್ದರೆ ತೀವ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್ಗಳನ್ನು ವಿತರಿಸಲಾಯಿತು. ಆಹಾರ ಇಲಾಖೆಯು ಗ್ರಾಮಸ್ಥರಿಗೆ ಬಿಪಿಎಲ್ ಕಾರ್ಡ್ಗಳನ್ನು
ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.