ADVERTISEMENT

ಸ್ಪರ್ಶದಲ್ಲಿ ಅರಳಿದ ಚಿಣ್ಣರ ಯಕ್ಷಗಾನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 17:58 IST
Last Updated 5 ಫೆಬ್ರುವರಿ 2021, 17:58 IST
ಸ್ಪರ್ಶ ಸಂಸ್ಥೆಯ ಚಿಣ್ಣರು ಶಾಂಭವಿ ವಿಜಯ ಪೌರಾಣಿಕ ಕಥಾ ಪ್ರಸಂಗದ ಯಕ್ಷಗಾನ ಪ್ರದರ್ಶಿಸಿದರು
ಸ್ಪರ್ಶ ಸಂಸ್ಥೆಯ ಚಿಣ್ಣರು ಶಾಂಭವಿ ವಿಜಯ ಪೌರಾಣಿಕ ಕಥಾ ಪ್ರಸಂಗದ ಯಕ್ಷಗಾನ ಪ್ರದರ್ಶಿಸಿದರು   

ಹೆಸರಘಟ್ಟ: ಚಂಡೆಯ ಝೇಂಕಾರ, ಕಾಲ್ಗೆಜ್ಜೆಯ ಘಲ್ ಘಲ್ ನಿನಾದ, ಚಿಣ್ಣರ ಕುಣಿತದ ಗತ್ತು...

ಸ್ಪರ್ಶ ಸಂಸ್ಥೆ ಆಯೋಜಿಸಿದ್ದ ‘ಆಡಿ ನಲಿ ಓದಿ ಕಲಿ’ ಕಾರ್ಯಕ್ರಮದ ಸಮಾರೋಪದಲ್ಲಿ ಕಂಡ ದೃಶ್ಯಗಳಿವು. ‘ಶಾಂಭವಿ ವಿಜಯ’ ಎನ್ನುವ ಪೌರಾಣಿಕ ಯಕ್ಷಗಾನವನ್ನು ಮಕ್ಕಳು ಸಾದರ ಪಡಿಸುವುದರ ಮೂಲಕ ಕಾರ್ಯಕ್ರಮವನ್ನು ಕಳೆಗಟ್ಟಿಸಿದರು.

ಮಂಗಳೂರಿನ ಅಂಬುರುಹ ಯಕ್ಷ ಕಲಾಕೇಂದ್ರದ ನಿರ್ದೇಶಕರಾದ ವಿಜಿತ್ ಶೆಟ್ಟಿ, ಸ್ಪರ್ಶ ಸಂಸ್ಥೆಯ ಅವಕಾಶ ವಂಚಿತ ಮಕ್ಕಳಿಗೆ ಮೂರು ತಿಂಗಳು ಯಕ್ಷಗಾನ ತರಬೇತಿ ನೀಡಿ ವೇದಿಕೆಯ ಮೇಲೆ ಯಶಸ್ವಿ ಪ್ರದರ್ಶನ ಮಾಡಿಸಿದರು.

ADVERTISEMENT

‘ಮೂರು ತಿಂಗಳಿನಿಂದ ಯಕ್ಷಗಾನ ಪ್ರಸಂಗವನ್ನು ಅಭ್ಯಾಸ ಮಾಡುತ್ತಿದ್ದೇವೆ. ನಿಜಕ್ಕೂ ಇದು ಹೊಸ ಅನುಭವ. ನಾಟಕಗಳನ್ನು ಅಭಿನಯಿಸುವುದು ಬಲು ಸಲೀಸು. ಆದರೆ ಯಕ್ಷಗಾನ ಮಾಡುವುದು ಅಷ್ಟು ಸುಲಭವಲ್ಲ. ಅದರ ವೇಷ ಭೂಷಣವೇ ವಿಶಿಷ್ಟವಾದುದು. ಒಂದು ಕೈ ಬೆರಳಿನ ಚಲನೆ ಅನೇಕ ಅರ್ಥಗಳನ್ನು ನೀಡುತ್ತದೆ. ಇವೆಲ್ಲದರ ಅನುಭವ ನನಗೆ ಅಯ್ತು’ ಎನ್ನುತ್ತಾರೆ ಪ್ಯಾರಾಮೆಡಿಕಲ್‍ ಕೋರ್ಸ್‌ನ ದ್ವಿತೀಯ ವರ್ಷದ ವಿದ್ಯಾರ್ಥಿನಿ ಗೌತಮಿ.

‘ಯಕ್ಷಗಾನದ ನನಗೆ ಏನೂ ಗೊತ್ತಿರಲಿಲ್ಲ. ಇದನ್ನು ನಾವು ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ನಾನೇ ಕೇಳಿಕೊಂಡಿದ್ದೆ. ಮಂಗಳೂರು ಭಾಗದವರಿಗೆ ಮಾತ್ರ ಇದು ಚೆನ್ನಾಗಿ ಒಲಿಯುತ್ತದೆ ಎಂದುಕೊಂಡಿದ್ದೆ. ಆದರೆ ಯಕ್ಷಗಾನದ ವೇಷ ತೊಟ್ಟು ವೇದಿಕೆಗೆ ಬಂದಾಗ ನಮಗೆ ಅರಿವಿಲ್ಲದಂತೆ ಪಾತ್ರದೊಳಗೆ ಜಾರುತ್ತೇವೆ’ ಎಂದು ದ್ವಿತೀಯ ಬಿ.ಎ.ವಿದ್ಯಾರ್ಥಿನಿ ಸರಸಮ್ಮ ಹೇಳಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ಯಕ್ಷಗಾನಕ್ಕೆ ಹಿಮ್ಮೇಳದಲ್ಲಿ ದೇವಿಪ್ರಸಾದ್ ಗುರುವಾಯನಕೆರೆ, ಚೆಂಡೆಯನ್ನು ಉದಯ ಕುಮಾರ್ ಜ್ಯೋತಿಗುಡ್ಡೆ ಹಾಗೂ ಮದ್ದಳೆಯಲ್ಲಿ ಮುರಳಿ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.