ADVERTISEMENT

ಮಲ್ಲಸಂದ್ರ: ಒತ್ತುವರಿ ತೆರವಿಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:16 IST
Last Updated 14 ಫೆಬ್ರುವರಿ 2020, 19:16 IST

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ಒತ್ತುವರಿ ಆಗಿರುವ 35 ಎಕರೆ 39 ಗುಂಟೆ ಸರ್ಕಾರಿ ಜಮೀನು ತೆರವಿಗೆ ಅಗತ್ಯ ಕ್ರಮ ಜರುಗಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತಂತೆ ಮುತ್ತು ಮಾರಿಯಮ್ಮ ಚಾರಿಟಬಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ವಾದ ಮಂಡಿಸಿ, ‘ಮಲ್ಲಸಂದ್ರ ಗ್ರಾಮದಲ್ಲಿನ ಸರ್ವೇ ನಂಬರ್ 33ರಲ್ಲಿನ 35ಎಕರೆ 39 ಗುಂಟೆ ಜಾಗವನ್ನು ಸರ್ಕಾರಿ ಬಂಡೆ ಖರಾಬು ಎಂದು ವರ್ಗೀಕರಿಸಲಾಗಿದೆ. ಆದರೆ, ಈ ಜಾಗದಲ್ಲಿ ಒತ್ತುವರಿ ಆಗಿದ್ದು ಇದರ ಮೇಲೆ ಜನಪ್ರತಿನಿಧಿಗಳು ಹಾಗೂ ಭೂ ಕಬಳಿಕೆದಾರರ ಕಣ್ಣು ನೆಟ್ಟಿದೆ. ಆದ್ದರಿಂದ, ಕಂದಾಯ ಇಲಾಖೆಯ ಸ್ವಾಧೀನದಲ್ಲಿರುವ ಈ ಜಮೀನನ್ನು ಬಿಬಿಎಂಪಿಗೆ ವರ್ಗಾಯಿಸಲು ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಮಲ್ಲಸಂದ್ರದ ಸರ್ವೇ ನಂಬರ್ 33ರಲ್ಲಿನ ಸರ್ಕಾರಿ ಜಮೀನನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ವರ್ಗಾವಣೆ ಮಾಡಬೇಕು ಎಂಬ ಮನವಿಯನ್ನು ಅರ್ಜಿದಾರರು ಸರ್ಕಾರಕ್ಕೆ ಸಲ್ಲಿಸಬಹುದು’ ಎಂದು ಸೂಚಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.