ಬೆಂಗಳೂರು: ‘ವೃಷಭಾವತಿ ನದಿ ನೀರು ರಾಮನಗರ ತಾಲ್ಲೂಕಿನ ಬೈರಮಂಗಲ ಕೆರೆಗೆ ಹೋಗುವುದನ್ನು ತಡೆಯುವ ಯೋಜನೆಗೆ ನ್ಯಾಯಾಲಯದ ಅನುಮತಿ ಪಡೆಯದೆಮರ ಕಡಿಯಬಾರದು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
‘ಪರಿಸರ ಮತ್ತು ಪರಿಸರ ವಿಜ್ಞಾನದ ಮೇಲೆ ಇದು ಪರಿಣಾಮ ಬೀರಬಹುದು. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ನೀಡಿರುವ ಆದೇಶ ವಜಾಗೊಳಿಸಬೇಕು’ ಎಂದು ಕೋರಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತು. ’ಯೋಜನೆಯ ಮುಂದಿನ ಎಲ್ಲ ಕಾಮಗಾರಿಗಳು ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ಹೇಳಿದೆ.
‘ಯಾವುದೇ ವೈಜ್ಞಾನಿಕ ಅಧ್ಯಯನ ಇಲ್ಲದೆ ಈ ಯೋಜನೆಗೆ 2018ರ ನವೆಂಬರ್ 23ರಲ್ಲಿ ಸರ್ಕಾರ ₹110 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಯೋಜನೆಯಿಂದ ಕೆರೆಯ ವ್ಯಾಪ್ತಿ ಕುಗ್ಗಲಿದೆ. ಅಲ್ಲದೇ ವೃಷಭಾವತಿ ನದಿಯನ್ನು ಇನ್ನಷ್ಟು ಕಲುಷಿತಗೊಳಿಸಲಿದೆ. ಕೆರೆ ನಂಬಿಕೊಂಡಿರುವ ನೀರಾವರಿ ಪ್ರದೇಶದ ರೈತರು ತೊಂದರೆಗೆ ಸಿಲುಕಲಿದ್ದಾರೆ’ ಎಂದು ಅರ್ಜಿದಾರರು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.