ಬೆಂಗಳೂರು: ಲಾಕ್ಡೌನ್ ಪರಿಹಾರ ಪಡೆಯಲು ಮನೆಗೆಲಸ ಕಾರ್ಮಿಕರು ನೋಂದಣಿ ಮಾಡಿಕೊಳ್ಳಲು ಇದ್ದ ತೊಡಕು ನಿವಾರಿಸಿ ಮಾರ್ಪಡಿಸಿರುವ ಮಾರ್ಗಸೂಚಿಯನ್ನು ಇತರ ಎಲ್ಲ ಅಸಂಘಟಿತ ಕಾರ್ಮಿಕರಿಗೂ ಅನ್ವಯಗೊಳಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮನೆಗೆಲಸ ಕಾರ್ಮಿಕರಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಎಲ್ಲಾ ಮನೆಗೆಲಸ ಕಾರ್ಮಿಕರಿಗೆ ಪರಿಹಾರ ಪಾವತಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಬೇಕು’ ಎಂದು ತಿಳಿಸಿದೆ.
ಮನೆಗೆಲಸ ಕಾರ್ಮಿಕರು ಪರಿಹಾರಕ್ಕೆ ನೋಂದಣಿ ಮಾಡಿಕೊಳ್ಳಲು ಅನುಕೂಲ ಆಗುವಂತೆ ಮಾರ್ಗಸೂಚಿ ಬದಲಿಸಲಾಗುವುದು ಎಂದು ಕಾರ್ಮಿಕ ಇಲಾಖೆ ತಿಳಿಸಿತ್ತು. ಉದ್ಯೋಗದಾತರಿಂದ ಪ್ರಮಾಣ ಪತ್ರ, ದೂರವಾಣಿ ಸಂಖ್ಯೆ ಸಹಿತ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸಲ್ಲಿಸುವುದರೊಂದಿಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಸಂಬಂಧ ಜುಲೈ 2ರಂದು ಮಾರ್ಪಡಿಸಿದ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ವಿವರಿಸಿತು.
ವಿಚಾರಣೆಯನ್ನು ಪೀಠ ಜುಲೈ 13ಕ್ಕೆ ಮುಂದೂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.