ಯಲಹಂಕ: ತಾಲ್ಲೂಕಿನ ಜಾಲಾ ಹಾಗೂ ಯಲಹಂಕ ಹೋಬಳಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗ ಉಳಿಸಿ, ಬಡವರಿಗೆ ಮನೆ ನೀಡಬೇಕೆಂದು ಒತ್ತಾಯಿಸಿ, ಕರ್ನಾಟಕ ಜಾತ್ಯತೀತ ಸಮಾಜವಾದಿ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಜಕ್ಕೂರಿನ ಅಂಬೇಡ್ಕರ್ ಸಮುದಾಯ ಭವನದಿಂದ ಕಾಲ್ನಡಿಗೆ ಜಾಥಾದ ಮೂಲಕ ತೆರಳಿದ ನೂರಾರು ಕಾರ್ಯಕರ್ತರು, ಜಕ್ಕೂರು ಬಡಾವಣೆ, ಜಿಕೆವಿಕೆ ಕ್ರಾಸ್ ಮಾರ್ಗವಾಗಿ ಸಾಗಿದರು. ಮಾರ್ಗಮಧ್ಯೆ ಅಳ್ಳಾಳಸಂದ್ರ ದಲ್ಲಿರುವ ಮಾಜಿ ಸಚಿವ ದಿವಂಗತ
ಬಿ.ಬಸವಲಿಂಗಪ್ಪನವರ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ತಹಶೀಲ್ದಾರ್ ಕಚೇರಿಯವರೆಗೆ ಬಂದರು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ರವಿಕುಮಾರ್, ‘ಕಳೆದೊಂದು ದಶಕದಿಂದ ಬಡಜನರು ಸ್ವಂತ ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಆದರೆ, ನೂರಾರು ಎಕರೆ ಸರ್ಕಾರಿ ಜಾಗಗಳನ್ನು ಅಕ್ರಮ
ವಾಗಿ ಕಬಳಿಸಿರುವ ಭೂಗಳ್ಳರು, ಹಸಿರು ವಲಯಗಳಲ್ಲಿ ಅನಧಿಕೃತ ಬಡಾವಣೆಗಳನ್ನು ನಿರ್ಮಿಸಿ ಕೋಟ್ಯಂತರ ಹಣ ಲಪಟಾಯಿಸಿದ್ದು, ಇದರಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಅವರು ದೂರಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕೆ.ನರಸಿಂಹ ಮೂರ್ತಿ, ‘ಸರ್ಕಾರಿ ಜಮೀನು ಒತ್ತುವರಿ ಕುರಿತು ಕಂದಾಯ ಅಧಿಕಾರಿ
ಗಳಿಂದ ಮಾಹಿತಿ ಪಡೆಯಲಾಗುವುದು. ಅಲ್ಲದೆ 15 ದಿನಗಳೊಳಗಾಗಿ ಸಂಘಟನೆಯ ಮುಖಂಡರೊಂದಿಗೆ ಸಭೆನಡೆಸಿ, ಜಮೀನು ಲಭ್ಯತೆ ಹಾಗೂ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿ, ಕಾನೂನುರೀತಿಯಲ್ಲಿ ಪರಿಹಾರ ಒದಗಿಸಲು ಶೀಘ್ರವಾಗಿ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.