ADVERTISEMENT

ಬೆಂಗಳೂರು: ಹೂಡಿ ಕೆರೆ- ಮಳೆಗೆ ಕೊಚ್ಚಿ ಹೋದ ದಂಡೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 21:58 IST
Last Updated 6 ಡಿಸೆಂಬರ್ 2021, 21:58 IST
ಹೂಡಿ ಕೆರೆ ದಂಡೆಯಲ್ಲಿ ಅಳವಡಿಸಿದ್ದ ಕಾಂಕ್ರೀಟ್‌ ಕೊಳವೆಗಳು ಕಿತ್ತು ಹೋಗಿರುವುದು
ಹೂಡಿ ಕೆರೆ ದಂಡೆಯಲ್ಲಿ ಅಳವಡಿಸಿದ್ದ ಕಾಂಕ್ರೀಟ್‌ ಕೊಳವೆಗಳು ಕಿತ್ತು ಹೋಗಿರುವುದು   

ಬೆಂಗಳೂರು: ಹೂಡಿ ಕೆರೆಯ ದಂಡೆ ಇತ್ತೀಚೆಗೆ ಸುರಿದ ಮಳೆಗೆ ಕೊಚ್ಚಿ ಹೋಗಿದೆ. ಇಲ್ಲಿ ಹೆಚ್ಚುವರಿ ನೀರು ಹರಿಯಲು ಅಳವಡಿಸಿದ್ದ ಪೈಪ್‌ಗಳು ಕಿತ್ತು ಹೋಗಿ 10 ದಿನಗಳಾದರೂ ದುರಸ್ತಿ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ತಕ್ಷಣ ದುರಸ್ತಿಪಡಿಸದಿದ್ದರೆ ಕೆರೆಗೆ ಮತ್ತಷ್ಟು ಹಾನಿ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ

ಹೂಡಿ ಕೆರೆ 15 ಎಕರೆ 10 ಗುಂಟೆ ವಿಸ್ತೀರ್ಣವಿದೆ. ಈ ಕೆರೆಯು ಕಸ, ಕೊಳಚೆ ಸೇರಿ ಕೆಟ್ಟು ಹೋಗಿತ್ತು. ಕೆರೆಯನ್ನು ಬಿಬಿಎಂಪಿಯು ವರ್ಷದ ಹಿಂದೆ ₹2.5 ಕೋಟಿ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಿತ್ತು. ಈ ಮಳೆಗಾಲದಲ್ಲಿ ಕೆರೆ ಸ್ವಚ್ಛ ನೀರಿನಿಂದಲೇ ಭರ್ತಿಯಾಗಿತ್ತು.

‘ಕಳೆದ ವರ್ಷ ಕೆರೆಯನ್ನು ಅಭಿವೃದ್ಧಿಪಡಿಸಿದ್ದರು. ದಂಡೆಗೆ ಮಣ್ಣು ತುಂಬಿ ಬಲಪಡಿಸಿದ್ದರು. ಜಲಕಾಯಕ್ಕೆ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಂಡಿದ್ದರು. ಬಳಿಕ ಕೆರೆ ಸ್ವಚ್ಛವಾಗಿತ್ತು. ಇತ್ತೀಚೆಗೆ ಸುರಿದ ಮಳೆಗೆ ದಂಡೆ ಕೊಚ್ಚಿ ಹೋಗಿದೆ’ ಎಂದು ಸ್ಥಳೀಯ ನಿವಾಸಿ ವಿರೂಪಾಕ್ಷಪ್ಪ ಮಾಹಿತಿ ನೀಡಿದರು.

ADVERTISEMENT

‘ಕೆರೆ ದಂಡೆಯನ್ನು ಗಟ್ಟಿಮುಟ್ಟಾಗಿ ನಿರ್ಮಿಸಿಲ್ಲ. ದಂಡೆ ಕೊಚ್ಚಿ ಹೋಗುವ ಸೂಚನೆ ಸಿಕ್ಕಿದಾಗಲೇ ಇದನ್ನು ದುರಸ್ತಿಪಡಿಸುತ್ತಿದ್ದರೆ ಪೈಪ್‌ಗಳು ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ದಂಡೆ ಕೊಚ್ಚಿ ಹೋಗಿ 10 ದಿನಗಳು ಕಳೆದ ಬಳಿಕವೂ ಬಿಬಿಎಂಪಿ ಅದನ್ನು ದುರಸ್ತಿಪಡಿಸುವ ಗೋಜಿಗೇ ಹೋಗಿಲ್ಲ. ಈಗಲಾದರೂ ದಂಡೆಯನ್ನು ಬಲಪಡಿಸಬೇಕು. ಇಲ್ಲದಿದ್ದರೆ ಭಾರಿ ಮಳೆಯಾದಾಗ ದಂಡೆ ಪೂರ್ತಿ ಕಿತ್ತು ಹೋಗಲಿದೆ’ ಎಂದು ಕೆರೆಗಳ ಸಂರಕ್ಷಣೆಯ ಜಾಗೃತಿಯಲ್ಲಿ ತೊಡಗಿರುವ ಬಾಲಾಜಿ ರಘೋತ್ತಮ್‌ ಬಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆ ಅಭಿವೃದ್ಧಿಗೆ ಅಗತ್ಯ ಇರುವಷ್ಟು ಅನುದಾನ ಮಂಜೂರಾಗದ ಕಾರಣ ಮುಖ್ಯ ದಂಡೆಯ ಐಬಳಿ ಕೋಡಿ ಯನ್ನು ಸಮರ್ಪಕವಾಗಿ ನಿರ್ಮಿಸಿಲ್ಲ. ದಂಡೆಗೆ ಮಣ್ಣು ಹಾಕಿ ಅಲ್ಲೇ ಕಾಂಕ್ರೀಟ್‌ ಕೊಳವೆಗಳನ್ನು ಅಳವಡಿಸಲಾಗಿತ್ತು. ಕಿತ್ತು ಹೋದ ಕೊಳವೆ ಸರಿಪಡಿಸುವುದಕ್ಕೂ
ಬಿಬಿಎಂಪಿ ಬಳಿ ದುಡ್ಡಿಲ್ಲ. ತಕ್ಷಣ ದುರಸ್ತಿ ಪಡಿಸದಿದ್ದರೆ ಮಳೆಯಿಂದ ಭರ್ತಿಯಾದ ಕೆರೆಯಷ್ಟೂ ನೀರು ಕಳೆದು ಕೊಳ್ಳ
ಬೇಕಾದೀತು’ ಎಂದು ಸ್ಥಳೀ ಯರುಕಳವಳ ವ್ಯಕ್ತಪಡಿಸಿದರು.

ಬಿಬಿಎಂಪಿ ದಾಖಲೆಗಳ ಪ್ರಕಾರ ಇದರಲ್ಲಿ ರಸ್ತೆಗೆ 33 ಗುಂಟೆ, ಸ್ಮಶಾನಕ್ಕೆ 36 ಗುಂಟೆ
ಒತ್ತುವರಿಯಾಗಿದೆ. ಖಾಸಗಿಯವರು ಈ ಕೆರೆ ಒತ್ತುವರಿ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.