ಅಶ್ವಾರೋಹಿ ಪೊಲೀಸ್
ಬೆಂಗಳೂರು: ನಗರದಲ್ಲಿ ಇನ್ನು ಮುಂದೆ ಅಶ್ವಾರೋಹಿ ಪೊಲೀಸ್ ಗಸ್ತು ನಡೆಯಲಿದೆ. ಜನದಟ್ಟಣೆ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲು ನಗರ ಪೊಲೀಸ್ ಇಲಾಖೆ ನಿರ್ಧರಿಸಿದ್ದು ಈ ಕ್ರಮ ಕೈಗೊಳ್ಳಲಾಗಿದೆ.
ಮೈಸೂರು ನಗರಕ್ಕೆ ಸಿಮೀತವಾಗಿದ್ದ ಅಶ್ವಾರೋಹಿ ಪೊಲೀಸ್ ಗಸ್ತು ನಗರಕ್ಕೂ ಆಗಮಿಸಿದ್ದು, ‘ಹೊಯ್ಸಳ‘, ‘ಚೀತಾ‘ದ ಜತೆಗೆ ಅಶ್ವಾರೋಹಿ ದಳದಿಂದಲೂ ನಗರದ ಆಯ್ದ ಸ್ಥಳಗಳಲ್ಲಿ ಗಸ್ತು ನಡೆಯಲಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಮಾಹಿತಿ ನೀಡಿದ್ದಾರೆ.
ನಗರದ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚು ನಿಗಾ ವಹಿಸುವ ಉದ್ದೇಶದಿಂದ ಮೈಸೂರಿನ ಒಂದು ತುಕಡಿಯನ್ನು ನಗರಕ್ಕೆ ಕರೆಸಿಕೊಳ್ಳಲಾಗಿದೆ. ಹೆಚ್ಚಿನ ನಿಗಾ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚು ಜನರು ಸೇರುವ ಕಬ್ಬನ್ ಉದ್ಯಾನ, ವಿಧಾನಸೌಧ, ಮೆಜೆಸ್ಟಿಕ್, ಎಂ.ಜಿ.ರಸ್ತೆ, ಚರ್ಚ್ ರಸ್ತೆ ಸೇರಿದಂತೆ ಹಲವು ಕಡೆ ಈ ಅಶ್ವಾರೋಹಿ ದಳದಿಂದ ಗಸ್ತು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜನದಟ್ಟಣೆ ನಡುವೆ ಅನುಚಿತವಾಗಿ ವರ್ತಿಸುವವರು, ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಎತ್ತರದಿಂದಲೇ ಹದ್ದಿನ ಕಣ್ಣಿಡುವ ಮೂಲಕ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ಮೈಸೂರಿನಂತೆಯೇ ನಗರದಲ್ಲೂ ಒಂದು ಘಟಕ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಎಸ್ಪಿ ದರ್ಜೆಯ ಅಧಿಕಾರಿಯನ್ನು ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.