ಬೆಂಗಳೂರು: ಅಗ್ರಹಾರ ದಾಸರಹಳ್ಳಿ ವಾರ್ಡ್ನಲ್ಲಿ ಬಿಬಿಎಂಪಿಯಿಂದ ನಿರ್ಮಾಣವಾಗಲಿರುವ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಭೂಮಿ ಪೂಜೆ ನೆರವೇರಿಸಿದರು.
₹35 ಕೋಟಿ ಅಂದಾಜು ಮೊತ್ತದ ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಧಿಯನ್ನು ಪಾಲಿಕೆ ನಿಗದಿ ಮಾಡಿದೆ. 4872.15 ಚದರ ಮೀಟರ್ ಜಾಗದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದೆ. ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ, ಪ್ರಯೋಗಾಲಯ, ಫಾರ್ಮಸಿ, ತುರ್ತು ಚಿಕಿತ್ಸೆ, ಒಳರೋಗಿ ವಿಭಾಗ, ತೀವ್ರ ನಿಗಾ ಘಟಕ (ಐಸಿಯು), ಶಸ್ತ್ರಚಿಕಿತ್ಸಾ ಕೊಠಡಿ, ಡಯಾಲಿಸಿಸ್ ಕೇಂದ್ರ, ಎಕ್ಸ್ ರೇ ವಿಭಾಗ, ಕ್ಯಾಂಟೀನ್ ಸೌಲಭ್ಯಗಳು ಇರಲಿವೆ.
‘ಈ ಆಸ್ಪತ್ರೆ ಸುತ್ತಮುತ್ತಲ ಬಡಾವಣೆ ಜನರಿಗೆ ಅನುಕೂಲವಾಗಲಿದೆ. ಇಲ್ಲಿ ಎಲ್ಲಾ ರೀತಿಯ ಚಿಕಿತ್ಸೆಯೂ ದೊರೆಯಲಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಇದಕ್ಕೂ ಮುನ್ನ ಗೋವಿಂದರಾಜನಗರ ವಾರ್ಡ್ನಲ್ಲಿ ಹೊಸಹಳ್ಳಿ ಹೆರಿಗೆ ಆಸ್ಪತ್ರೆಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.
₹7 ಕೋಟಿಯಲ್ಲಿ 30 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದೆ. ಈ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ, ಪ್ರಯೋಗಾಲಯ, ತುರ್ತು ಚಿಕಿತ್ಸಾ ವಿಭಾಗ, ಒಳರೋಗಿ ವಿಭಾಗ, ಐಸಿಯು, ಶಸ್ತ್ರಚಿಕಿತ್ಸಾ ಕೊಠಡಿ, ಎಕ್ಸ್ ರೇ ವಿಭಾಗ, ಕ್ಯಾಂಟೀನ್ ವ್ಯವಸ್ಥೆ ಇವೆ.
ಆರ್. ಅಶೋಕ್ಗೆ ಸೋಮಣ್ಣ ಟಾಂಗ್
‘ಕಂದಾಯ ಸಚಿವ ಆರ್. ಅಶೋಕ್ ಅವರು ಹೆಚ್ಚು ಬುದ್ಧಿವಂತರಾಗಿದ್ದಾರೆ. ಅಷ್ಟೊಂದು ಬುದ್ಧಿವಂತರಾಗುವುದು ಬೇಡ’ ಎಂದು ವಸತಿ ಸಚಿವ ವಿ. ಸೋಮಣ್ಣ ಟಾಂಗ್ ನೀಡಿದರು.
ಅಗ್ರಹಾರ ದಾಸರಹಳ್ಳಿಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರ ಜತೆಯಲ್ಲೇ ಹೊರಟಿದ್ದ ಆರ್. ಅಶೋಕ್ ಅವರನ್ನು ವಾಪಸ್ ಕರೆತಂದು ಅಭಿನಂದಿಸಿದ ಸೋಮಣ್ಣ, ‘ಈಗ ಮೊದಲಿನಂತೆ ಆರ್. ಅಶೋಕ್ ಅವರು ಇಲ್ಲ. ನಮ್ಮನ್ನೆಲ್ಲಾ ಮೊದಲಿನಂತೇ ನೋಡಿಕೊಳ್ಳಬೇಕು. ಕೋವಿಡ್–19 ಇರುವ ಕಾರಣ ಉಪಾಹಾರ ಸೇವಿಸಲೂ ಹೆದರುತ್ತಾರೆ. 69 ವರ್ಷದ ನಾನೇ ಹೆದರುತ್ತಿಲ್ಲ. ನನ್ನ ಆಯಸ್ಸನ್ನೂ ನಿಮಗೇ ದೇವರು ಕೊಡಲಿ, ನಾವು ಕರೆದ ಕಡೆಗೆಲ್ಲಾ ಬನ್ನಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.