ಬೆಂಗಳೂರು: ಇಟ್ಟಮಡುವಿನ ಬಾಲಾಜಿ ಎನ್ಕ್ಲೇವ್ ವಸತಿ ಸಮುಚ್ಚಯದ ಅಪಾರ್ಟ್ಮೆಂಟ್ನಲ್ಲಿ ಇತ್ತೀಚೆಗೆ ನಡೆದಿದ್ದ ಕಳವು ಪ್ರಕರಣದ ಆರೋಪಿ ಜಿ.ನಾಗೇಂದ್ರ ಯಾನೆ ಬ್ಯಾಡ್ ನಾಗ (19) ಎಂಬಾತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ₹4.40 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
‘ಅಪಾರ್ಟ್ಮೆಂಟ್ನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ಸೂರ್ಯನಾರಾಯಣ ರೆಡ್ಡಿ ಎಂಬುವರು ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ. ಇಟ್ಟಮಡುವಿನ ಚಿತ್ತೂರು ಬಸ್ ನಿಲ್ದಾಣ ಸಮೀಪದ 10ನೇ ಅಡ್ಡರಸ್ತೆಯಲ್ಲಿ ಆರೋಪಿ ವಾಸವಿದ್ದ. ಆತನಿಂದ ಒಟ್ಟು 100.6 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ವಸತಿ ಸಮುಚ್ಚಯಗಳನ್ನು ಗುರುತಿಸುತ್ತಿದ್ದ ಆರೋಪಿ, ಅವುಗಳ ಮೇಲೆ ಪಾರಿವಾಳ ಹಾರಿಬಿಡುತ್ತಿದ್ದ. ಬಳಿಕ ಮನೆಗಳಿಗೆ ಹೋಗುತ್ತಿದ್ದ ಆತ, ತಾನು ಸಾಕಿರುವ ಪಾರಿವಾಳ ನಿಮ್ಮ ಮನೆಯ ಬಾಲ್ಕನಿಯಲ್ಲಿ ಕುಳಿತಿದೆ. ಅದನ್ನು ಹಿಡಿದುಕೊಂಡು ಹೋಗುತ್ತೇನೆ ಎಂದು ಹೇಳಿ ಒಳಗೆ ಪ್ರವೇಶಿಸುತ್ತಿದ್ದ. ಮನೆಯಲ್ಲಿ ಎಷ್ಟು ಮಂದಿ ವಾಸಿಸುತ್ತಿದ್ದಾರೆ. ಯಾವೆಲ್ಲ ಬೆಲೆ ಬಾಳುವ ವಸ್ತುಗಳಿವೆ ಎಂಬುದನ್ನು ಗುರುತಿಸಿಕೊಂಡು ಹಿಂತಿರುಗುತ್ತಿದ್ದ. ಯಾರೂ ಇಲ್ಲದ ಸಮಯದಲ್ಲಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.