ADVERTISEMENT

‘ತಾಂತ್ರಿಕ ಜ್ಞಾನದ ಕೊರತೆ: ವೇತನ ಬಡ್ತಿ, ಭತ್ಯೆ ವಿಳಂಬ’

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 19:54 IST
Last Updated 8 ಏಪ್ರಿಲ್ 2019, 19:54 IST

ಬೆಂಗಳೂರು: ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು (ಡಿಡಿಒ) ಸಕಾಲಕ್ಕೆ ಎಚ್‌ಆರ್‌ಎಂಎಸ್‌ನಲ್ಲಿ ಸೂಕ್ತ ಮಾಹಿತಿ ಭರ್ತಿ ಮಾಡದ ಕಾರಣ ಆಯಾ ಶಾಲೆಗಳ ಶಿಕ್ಷಕರ ವಿಶೇಷ ಭತ್ಯೆ ಮತ್ತು ಹೆಚ್ಚುವರಿ ವೇತನ ಬಡ್ತಿಯನ್ನು ಪಡೆಯುವ ಪ್ರಕ್ರಿಯೆ ವಿಳಂಬವಾಗುತ್ತಿದೆ.

‘ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ(ಎಚ್‌ಆರ್‌ಎಂಎಸ್‌) ತಂತ್ರಾಂಶದ ನಿರ್ವಹಣೆಯನ್ನು ಈಗ ಹೊಸ ಕಂಪನಿಗೆ ನೀಡಲಾಗಿದೆ. ಹಾಗಾಗಿ ಅದರಲ್ಲಿ ಮಾಹಿತಿ ಭರ್ತಿ ಮಾಡುವ ವಿಧಾನ ಗೊತ್ತಾಗುತ್ತಿಲ್ಲ. ಆದ್ದರಿಂದ ಭತ್ಯೆ ಮತ್ತು ಬಡ್ತಿಯ ಮೊತ್ತವನ್ನು ಮೂಲವೇತನದೊಂದಿಗೆ ಪಡೆಯಲು ವಿಳಂಬವಾಗುತ್ತಿದೆ’ ಎಂದು ಪ್ರೌಢಶಾಲಾ ಸಹ–ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ.ಮಂಜುನಾಥ್‌ ತಿಳಿಸಿದರು.

‘ಹೊಸದನ್ನು ಪರಿಚಯಿಸಿದಾಗ, ಅದನ್ನು ಬಳಸುವ ಕುರಿತು ಡಿಡಿಒಗಳಿಗೆ ಸೂಕ್ತ ತರಬೇತಿ ಕೊಡಬೇಕು. ಇಲ್ಲದಿದ್ದರೆ ಶಿಕ್ಷಕರಿಗೆ ತೊಂದರೆ ಆಗುತ್ತದೆ. ಈಗಿನ ಎಚ್‌ಆರ್‌ಎಂಎಸ್‌ನಲ್ಲಿ ಮಾಹಿತಿ ಭರ್ತಿಯಾಗದೆ, ಪ್ರಾಥಮಿಕ ಶಾಲೆಗಳಿಂದ ಬಡ್ತಿಯಾಗಿ ಪ್ರೌಢಶಾಲೆಗಳಿಗೆ ಬಂದಿರುವ ಅಂದಾಜು 2 ಸಾವಿರ ಶಿಕ್ಷಕರಿಗೆ ತೊಂದರೆಯಾಗಿದೆ’ ಎಂದು ಸಮಸ್ಯೆ ವಿವರಿಸಿದರು.

ADVERTISEMENT

6ನೇ ವೇತನ ಆಯೋಗದ ಶಿಫಾರ ಸ್ಸಿನ ಅನ್ವಯ ಶಿಕ್ಷಕರಿಗೆ ನೀಡಲಾಗಿದ್ದ ವಿಶೇಷ ಭತ್ಯೆ ಹಾಗೂ ಹೆಚ್ಚುವರಿ ವೇತನ ಬಡ್ತಿಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ ರಾಜ್ಯ ಸರ್ಕಾರ ಜನವರಿಯಲ್ಲಿ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.