ADVERTISEMENT

ನಡುರಸ್ತೆಯಲ್ಲೇ ಕುಡಿದು ತೂರಾಡಿದ ‘ಹುಚ್ಚ ವೆಂಕಟ್’

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 16:50 IST
Last Updated 6 ಸೆಪ್ಟೆಂಬರ್ 2018, 16:50 IST
   

ಬೆಂಗಳೂರು: ನಟ ಹುಚ್ಚ ವೆಂಕಟ್ ನಡುರಸ್ತೆಯಲ್ಲೇ ಕುಡಿದು ತೂರಾಡುತ್ತ ಬ್ಯಾಡರಹಳ್ಳಿ ಮುಖ್ಯರಸ್ತೆಯ ಬೇಕರಿಯೊಂದಕ್ಕೆ ನುಗ್ಗಿ ರಂಪಾಟ ಮಾಡಿರುವ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿ ಕಳುಹಿಸಿದ್ದಾರೆ.

ಬುಧವಾರ ಮಧ್ಯಾಹ್ನ ಬಾಟಲಿ ಹಿಡಿದು ಜ್ಞಾನಭಾರತಿ ಕ್ಯಾಂಪಸ್ ಹಾಗೂ ಉಲ್ಲಾಳ ಮುಖ್ಯರಸ್ತೆಯಲ್ಲಿ ತಿರುಗಾಡಿದ್ದ ವೆಂಕಟ್, ಗುರುವಾರ ಬೆಳಿಗ್ಗೆ ಬ್ಯಾಡರಹಳ್ಳಿ ಮುಖ್ಯರಸ್ತೆಗೆ ಬಂದಿದ್ದರು. ಕೆಲ ಯುವಕರು ಅವರಿಗೆ ಜೈಕಾರ ಕೂಗುತ್ತ ಸೆಲ್ಫಿಯನ್ನೂ ತೆಗೆದುಕೊಂಡರು.

ನಂತರ ಮೊಬೈಲ್‌ನಲ್ಲಿ ‘ಹುಚ್ಚ ವೆಂಕಟ್ಟು ನಾನು... ನನ್ನನ್ನು ಮುಟ್ಟೋರು ಯಾರು...’ ಎಂಬ ಹಾಡು ಹಾಕಿಕೊಂಡು ಬೇಕರಿ ಹತ್ತಿರ ತೆರಳಿದ ಅವರು, ಅಲ್ಲಿ ನಿಂತಿದ್ದ ಯುವಕನಿಗೆ ಕೋಲಿನಿಂದ ಹೊಡೆದಿದ್ದಾರೆ. ‘ನನ್ನ ಎದುರು ನಿಲ್ಲುವ ಧೈರ್ಯ ಇದಿಯಾ ನಿಂಗೆ. ಮಂಡಿಯೂರಿ ಕುತ್ಕೊಳೋ’ ಎಂದು ಗದರಿದ್ದಾರೆ. ಆತ ಭಯಬಿದ್ದು ಕುಳಿತುಕೊಂಡ ಬಳಿಕ, ಬೇಕರಿ ಮಾಲೀಕನ ಕಡೆಗೆ ಹೋಗಿದ್ದಾರೆ.

ADVERTISEMENT

‘ಅಂಗಡಿ ಬಾಗಿಲು ಹಾಕೋ’ ಎನ್ನುತ್ತಾ ಅವರಿಗೂ ಮನಸೋ ಇಚ್ಛೆ ಹೊಡೆದಿದ್ದಾರೆ. ಮಾಲೀಕರು ತಪ್ಪಿಸಿಕೊಂಡು ಓಡಿದಾಗ, ಅಟ್ಟಿಸಿಕೊಂಡು ಹೋಗಿ ರಂಪಾಟ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಪೊಲೀಸರು, ಅವರನ್ನು ಠಾಣೆಗೆ ಕರೆದೊಯ್ದು ಬುದ್ಧಿ ಹೇಳಿದ್ದಾರೆ.

‘ಯುವಕ ದೂರು ಕೊಡಲು ನಿರಾಕರಿಸಿದ್ದರಿಂದ, ಸಾಮಾನ್ಯ ಪ್ರಕರಣ (ಎನ್‌ಸಿಆರ್) ಎಂದು ಪರಿಗಣಿಸಿ ಬಿಟ್ಟು ಕಳುಹಿಸಿದ್ದೇವೆ’ ಎಂದು ಬ್ಯಾಡರಹಳ್ಳಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.