ADVERTISEMENT

ಬೆಂಗಳೂರು: ದ್ವಿಚಕ್ರ ವಾಹನದಿಂದ ಬಿದ್ದ ಪತಿ- ರಸ್ತೆ ಗುಂಡಿ ಮುಚ್ಚಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 22:10 IST
Last Updated 3 ನವೆಂಬರ್ 2022, 22:10 IST
ರಸ್ತೆ ಗುಂಡಿ ಮುಚ್ಚಿ ವಿಡಿಯೊ ಹಂಚಿಕೊಂಡ ಮಹಿಳೆ
ರಸ್ತೆ ಗುಂಡಿ ಮುಚ್ಚಿ ವಿಡಿಯೊ ಹಂಚಿಕೊಂಡ ಮಹಿಳೆ   

ಬೆಂಗಳೂರು: ರಸ್ತೆ ಗುಂಡಿಯಿಂದ ದ್ವಿಚಕ್ರ ವಾಹನದಿಂದ ಬಿದ್ದ ಪತಿಯ ಸ್ಥಿತಿ ಕಂಡ ಮಹಿಳೆಯೊಬ್ಬರು ಕಲ್ಲು ಮಣ್ಣಿನಿಂದ ಆ ಗುಂಡಿಯನ್ನು ಮುಚ್ಚಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದು, ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ಅಸಮಾಧಾನ
ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ನಾಗಮಣಿ ಬರೆದುಕೊಂಡಿರುವ ವಿವರ ಹೀಗಿದೆ...

‘ಗುರುವಾರ ಬೆಳಿಗ್ಗೆ ಮಲ್ಲೇಶ್ವರ 75 ಬಸ್ ಸ್ಟ್ಯಾಂಡ್, 18ನೇ ಕ್ರಾಸ್‌ನಲ್ಲಿ ರಸ್ತೆ ಗುಂಡಿಯಿಂದ ನನ್ನ ಗಂಡ ಆಕ್ಟಿವಾದಲ್ಲಿ ಬರುವಾಗ ಪ್ರಾಣಾಪಾಯದಿಂದ ಕೂದಲೆಳೆಯಲ್ಲಿ ಬಚಾವಾದರು. ಹಾಗಾಗಿ ಆ ಗುಂಡಿಯನ್ನು ಈಗ ಹೋಗಿ ಕಲ್ಲು ಮಣ್ಣಿನಿಂದ ಗುಂಡಿಯನ್ನು ಮುಚ್ಚಿ ಬಂದೆವು. ಮಲ್ಲೇಶ್ವರದ ಅವ್ಯವಸ್ಥೆಯನ್ನು ಇನ್ನಾದರೂ ಸರಿಮಾಡಲು ಸಾರ್ವಜನಿಕರು ಒತ್ತಾಯ ಮಾಡಿ’
– ಎಂ.ನಾಗಮಣಿ.

ADVERTISEMENT

ಈ ವಿಡಿಯೊವನ್ನು ಗುರುವಾರ ರಾತ್ರಿಯವರೆಗೆ 50 ಸಾವಿರಕ್ಕೂ ಹೆಚ್ಚು ಮಂದಿ ಫೇಸ್‌ಬುಕ್‌ನಲ್ಲಿ ವೀಕ್ಷಿಸಿದ್ದು, ಅನೇಕರು ರಸ್ತೆಗುಂಡಿಗಳಿಂದ ಆಗುತ್ತಿರುವ ಅನಾಹುತದ ಕುರಿತು ಪ್ರತಿಕ್ರಿಯೆ
ಬರೆದಿದ್ದಾರೆ.

‘ಮಲ್ಲೇಶ್ವರ 18 ಅಡ್ಡರಸ್ತೆ ಮಾತ್ರವಲ್ಲ, ಮಲ್ಲೇಶ್ವರದಾದ್ಯಂತ ನಮಗೆ ರಸ್ತೆ ಗುಂಡಿಗಳ ಬಗ್ಗೆ ದೂರುಗಳು ಬಂದಿವೆ. ಮಳೆಯಿಂದಾಗಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿಲ್ಲ. ಮಳೆದ ನಿಂತ ಒಂದೆರಡು ದಿನಗಳಲ್ಲಿ ಎಲ್ಲ ಗುಂಡಿಗಳನ್ನೂ ಮುಚ್ಚಲಾಗುತ್ತದೆ’ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಕಿರಿಯ ಎಂಜಿನಿಯರ್‌ ಜಯಂತ್‌ ಕುಮಾರ್‌
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.