ಬೆಂಗಳೂರು: ‘ಅನಗತ್ಯವಾಗಿ ಆಗಾಗ ಗಡಿ ಭಾಗದಲ್ಲಿನ ಕನ್ನಡಿಗರ ಸ್ವಾಭಿಮಾನ ಕೆಣಕುವ ಕಾರ್ಯಗಳಿಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಬಾರದು. ಕನ್ನಡಿಗರು ಒಂದು ಇಂಚು ಜಾಗವನ್ನೂ ಅವರಿಗೆ ಬಿಟ್ಟುಕೊಡುವುದಿಲ್ಲ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ತಿಳಿಸಿದರು.
ಹೃದಯವಾಹಿನಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ
ಯೋಗದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ 14ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಮಾತನಾಡಿದರು.
‘ಭಾಷಾ ಸಾಮರಸ್ಯ ಮತ್ತು ಸಹಬಾಳ್ವೆಯೇ ಗಡಿ ಭಾಗದ ಜನರ ಸಾಮಾಜಿಕ ಭದ್ರತೆಗೆ ಪ್ರಮುಖ ಸಾಧನ ಎಂಬುದನ್ನು ಮಹಾರಾಷ್ಟ್ರ ಸರ್ಕಾರ ಅರಿತುಕೊಳ್ಳಬೇಕು. ಗಡಿ ಭಾಗದಲ್ಲಿ ಕನ್ನಡಿಗರ ಸ್ಥಿತಿ ಚಿಂತಾಜನಕವಾಗಿದೆ. ಮರಾಠಿ ಪುಂಡರು ನಡೆಸುತ್ತಿರುವ ಉದ್ಧಟತನ ಸಹಿಸಲಾಗುತ್ತಿಲ್ಲ. ಮಹಾರಾಷ್ಟ್ರ ಗಡಿ ಭಾಗದಲ್ಲಿನ ನಮ್ಮ ಕನ್ನಡಿಗರ ಭಾವನೆಗಳಿಗೆ ಮತ್ತು ಅವರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕು’ ಎಂದು ತಿಳಿಸಿದರು.
‘ಕನ್ನಡ ಬಳಕೆಯು ಹೆಚ್ಚಾಗಬೇಕಾದರೆ ಪ್ರತಿಯೊಬ್ಬರೂ ಮನೆಯಲ್ಲಿ ಕನ್ನಡ ಬಳಸುವ ಪ್ರತಿಜ್ಞೆ ಮಾಡಬೇಕು. ಸಾಮಾನ್ಯ ಜನರ ಭಾಷೆಯಾಗಿರುವ ಕನ್ನಡವನ್ನು ಆಡಳಿತ ಭಾಷೆಯಾಗಿಸಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯೂ ಅಗತ್ಯ.ಆಂಗ್ಲ ಭಾಷೆಯ ವ್ಯಾಮೋಹವು ಕನ್ನಡದ ಅಸ್ಮಿತೆಗೆ ಧಕ್ಕೆಯಾಗುತ್ತಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯದಲ್ಲಿನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು’ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುರೇಶ್ ಕುಮಾರ್, ರಾಜಣ್ಣ ಎಚ್., ಎಚ್.ಜಿ. ಅನಿಲ್ ಕುಮಾರ್, ಅಬ್ದುಲ್ ಸುಬಾನ್, ವನಿತಾ ಕೆ., ವಿನಯ್ ಕೆ.ಸಿ., ಬಾಣಾವರ ವಿಜಯ್, ವಿಜಯ್ ಶ್ರೀನಿವಾಸ್ ಹಾಗೂ ಕೆ.ಪಿ ನಾರಾಯಣ ಅವರಿಗೆ ‘ಹೃದಯವಂತ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.