ಬೆಂಗಳೂರು:‘ಈಗಿನ ಪೀಳಿಗೆಯು ಹಿಂದಿನ ಪೀಳಿಗೆಗಿಂತ ಹೆಚ್ಚು ಜಾಗತಿಕ ವಿಚಾರಗಳ ಹಾಗೂ ತಂತ್ರಜ್ಞಾನದ ತಿಳಿವಳಿಕೆ ಹೊಂದಿದೆ. ಐಐಎಂನಲ್ಲಿರುವಪ್ರೇರಕ ಮನಸ್ಸುಗಳಿಂದ ಇದು ಸಾಧ್ಯವಾಗಿದೆ’ ಎಂದುಐಬಿಎಂ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅರವಿಂದ ಕೃಷ್ಣ ಅಭಿಪ್ರಾಯಪಟ್ಟರು.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಆನ್ಲೈನ್ ಮೂಲಕ ಹಮ್ಮಿಕೊಂಡಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರು ಐಐಎಂ ನಿರ್ದೇಶಕ ಪ್ರೊಫೆಸರ್ ರಿಷಿಕೇಶ ಟಿ.ಕೃಷ್ಣನ್, ‘ಕೋವಿಡ್ ಅಡೆತಡೆಗಳ ನಡುವೆಯೂ ಸಂಸ್ಥೆಯ 2021ನೇ ತಂಡದ ವಿದ್ಯಾರ್ಥಿಗಳು ಹೆಸರಾಂತ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ. ನಿಮ್ಮ ಯಶಸ್ಸು ನಿರ್ಧರಿಸುವುದು ನಿಮ್ಮ ಬುದ್ಧಿಶಕ್ತಿ, ಅನುಭವ ಹಾಗೂ ಪದವಿ ಅಲ್ಲ. ಜೀವನದುದ್ದಕ್ಕೂ ಕಲಿಯುತ್ತಲೇ ಇರಬೇಕು ಎಂಬ ಹಂಬಲವು ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ’ ಎಂದರು.
ನಿರ್ದೇಶಕ ಮಂಡಳಿಯ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ,‘ದೇಶದ ಪ್ರಭಾವಶಾಲಿ ನಿರ್ವಹಣಾ ಚಿಂತಕರಲ್ಲಿ ಒಬ್ಬರಾದ ರಿಷಿಕೇಶ ಕೃಷ್ಣನ್ ಅವರು ಇಂದೋರ್ನ ಐಐಎಂನಲ್ಲಿ ನಿರ್ದೇಶಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ, ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.
ಸಂಸ್ಥೆಯಪಿಎಚ್.ಡಿ, ಪಿಜಿಪಿ, ಇಪಿಜಿಪಿ, ಪಿಜಿಪಿಇಎಂ,ಪಿಜಿಪಿಪಿಎಂ ಹಾಗೂವಿವಿಧ ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆ ಮಾಡಿರುವ ಒಟ್ಟು 624 ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪದವಿ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.