ಕೆ.ಆರ್.ಪುರ: ಸರ್ಕಾರ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮಂಜೂರು ಮಾಡಿರುವ ವ್ಯವಸಾಯದ ಭೂಮಿಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಬಡಾವಣೆಯ ನಿವೇಶನಗಳಿಗೆ ಖಾತೆ ನೀಡಬಾರದು ಎಂದು ಒತ್ತಾಯಿಸಿ ಪ್ರಜಾ ವಿಮೋಚನಾ ಚಳವಳಿಯ ಕಾರ್ಯಕರ್ತರು ಬಿದರಹಳ್ಳಿ ಗ್ರಾಮ ಪಂಚಾಯತಿ ಎದುರು ತಮಟೆ ಚಳವಳಿ ನಡೆಸಿದರು.
ಬೆಂಗಳೂರು ಪೂರ್ವ ತಾಲ್ಲೂಕು ಬಿದರಹಳ್ಳಿ ಹೋಬಳಿಯ ಬೈಯಪ್ಪನಹಳ್ಳಿ ಗ್ರಾಮದ ಸರ್ವೆ ನಂ 130, 131/1, 131/2, 131/3, 131/4 ಮತ್ತು 169 ಸೇರಿದಂತೆ ಕೆಲವು ಸರ್ವೆ ನಂಬರ್ ಜಮೀನುಗಳು ಪರಿಶಿಷ್ಟ ಜಾತಿಯವರಿಗೆ ಮಂಜೂರಾಗಿದೆ. ಈ ಸದರಿ ಭೂಮಿಗಳು ಹಸಿರು ವಲಯ ವ್ಯಾಪ್ತಿಗೆ ಒಳಪಟ್ಟಿದೆ. ವ್ಯವಸಾಯಕ್ಕೆ ಮಂಜೂರಾಗಿದ್ದ ಸುಮಾರು 40 ಎಕರೆ ಜಮೀನಿನಲ್ಲಿ ಬಿಲ್ಡರ್ಗಳು ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಖಾಸಗಿ ಬಡಾವಣೆಗಳನ್ನು ನಿರ್ಮಿಸಿದ್ದಾರೆ ಎಂದು ಪ್ರಜಾ ವಿಮೋಚನಾ ಚಳವಳಿಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ದೂರಿದರು.
ಸಂಘಟನೆಯ ಬೆಂಗಳೂರು ವಿಭಾಗೀಯ ಅಧ್ಯಕ್ಷ ಮಾದೇಶ್ ಮಾತನಾಡಿ, ‘ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ಭೂಮಿಗಳಿಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಹಾಗಾಗಿ ಹಸಿರು ವ್ಯಾಪ್ತಿಯಲ್ಲಿ ನಿರ್ಮಿಸಿರುವ ಖಾಸಗಿ ಬಡಾವಣೆಯಲ್ಲಿ ಅಕ್ರಮ ಮನೆ ಮತ್ತು ನಿವೇಶನಗಳಿಗೆ ಗ್ರಾಮ ಪಂಚಾಯಿತಿಯಿಂದ ಖಾತೆಗಳನ್ನು ನೀಡಬಾರದು‘ ಎಂದು ಒತ್ತಾಯಿಸಿದರು.
ಪೂರ್ವ ತಾಲ್ಲೂಕು ಅಧ್ಯಕ್ಷ ಆದೂರು ಗಣೇಶ್, ಆಶ್ರಫ್ ಅಲಿ, ನಿಸಾರ್, ಗುಲಾಬ್ ಜಾನ್, ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.