ಬೆಂಗಳೂರು: ಆಮ್ಲಜನಕ ಸಿಲಿಂಡರ್ ಹಾಗೂ ಆಮ್ಲಜನಕ ಸಾಂದ್ರೀಕರಣ ಸಾಧನವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಎಸ್.ಬಿ. ಮಂಜುನಾಥ್ (27), ರಾಜ್ಕುಮಾರ್ (30) ಹಾಗೂ ಅನಿಲ್ ಕುಮಾರ್ (39) ಬಂಧಿತರು. ಅವರಿಂದ ₹5 ಲಕ್ಷ ಮೌಲ್ಯದ 2 ಆಮ್ಲಜನಕ ಸಿಲಿಂಡರ್, 1 ಆಮ್ಲಜನಕ ಸಾಂದ್ರೀಕರಣ ಸಾಧನ, ಮೂರು ಮೊಬೈಲ್ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.
‘ಚಾಮರಾಜಪೇಟೆಯಲ್ಲಿರುವ ಸಿಗಾ ಗ್ಯಾಸ್ ಕಂಪನಿ ಸಿಬ್ಬಂದಿ ನವೀನ್ ಎಂಬಾತನ ಜೊತೆ ಒಡನಾಟ ಹೊಂದಿದ್ದ ಆರೋಪಿಗಳು, ಆತನ ಮೂಲಕ ಆಮ್ಲಜನಕ ಖರೀದಿಸುತ್ತಿದ್ದರು. ಅದನ್ನು ಕೊರೊನಾ ಸೋಂಕಿತರಿಗೆ ಹಾಗೂ ಅವರ ಸಂಬಂಧಿಕರಿಗೆ ದುಬಾರಿ ಬೆಲೆಗೆ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.