ADVERTISEMENT

ಐಎಂಎ ಕಚೇರಿ ಎದುರು ಪ್ರತಿಭಟನೆ, ಕಲ್ಲು ತೂರಾಟ; ಲಘು ಲಾಠಿ ಪ್ರಹಾರ

ಐಎಂಎ ಕಚೇರಿ ಎದುರು ಹೂಡಿಕೆದಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 15:23 IST
Last Updated 17 ನವೆಂಬರ್ 2019, 15:23 IST
ತಲೆಗೆ ಕಲ್ಲೇಟು ಬಿದ್ದು ಗಾಯಗೊಂಡ ಮಹಿಳೆಯನ್ನು ಪೊಲೀಸರು ವಿಚಾರಿಸಿದರು
ತಲೆಗೆ ಕಲ್ಲೇಟು ಬಿದ್ದು ಗಾಯಗೊಂಡ ಮಹಿಳೆಯನ್ನು ಪೊಲೀಸರು ವಿಚಾರಿಸಿದರು   

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪ ಹೊತ್ತಿರುವ ಐಎಂಎ ಸಮೂಹ ಕಂಪನಿ ಕಚೇರಿ ಎದುರು ಹೂಡಿಕೆದಾರರ ಭಾನುವಾರ ದಿಢೀರ್‌ ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಬೀಸಿದರು.

ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಕಂಪನಿ ಕಚೇರಿ ಎದುರು ಮಧ್ಯಾಹ್ನ ಸೇರಿದ್ದ ಪ್ರತಿಭಟನಾಕಾರರು, ‘ಐಎಂಎ ಸಮೂಹ ಕಂಪನಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಮುಗಿಸಬೇಕು. ನಮ್ಮ ಹಣವನ್ನು ವಾಪಸು ಕೊಡಿಸಬೇಕು’ ಎಂದು ಒತ್ತಾಯಿಸಿದರು.

ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ, ‘ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉ‍ಪಚುನಾವಣೆ ದಿನಾಂಕ ಪ್ರಕಟವಾಗಿದೆ. ಕ್ಷೇತ್ರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಇಲ್ಲಿಂದ ವಾಪಸು ಹೋಗಿ’ ಎಂದು ಕೋರಿದರು.

ADVERTISEMENT

ಅದಕ್ಕೆ ಕ್ಯಾರೆ ಎನ್ನದ ಪ್ರತಿಭಟನಾಕಾರರು, ಸ್ಥಳ ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದರು. ಕಂಪನಿ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರು.

ಇದೇ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಮ್ತಾಜ್‌ ಎಂಬುವರಿಗೆ ಕಲ್ಲೇಟು ಬಿದ್ದು ರಕ್ತ ಬರುತ್ತಿತ್ತು. ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಲಘು ಲಾಠಿ ಬೀಸಿ ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಿದರು. ಕೆಲವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯರು. ಇದರಿಂದ ಸ್ಥಳದಲ್ಲಿ ರಾತ್ರಿಯವರೆಗೂ ಬಿಗುವಿನ ವಾತಾವರಣವಿತ್ತು. ಮುಂಜಾಗ್ರತಾ ಕ್ರಮವಾಗಿ ಐಎಂಎ ಕಚೇರಿ ಹಾಗೂ ಆಭರಣ ಮಳಿಗೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಹಣ ಸಿಗುವವರೆಗೂ ಹೋರಾಟ: ‘ಕಳೆದ ಭಾನುವಾರವೂ ಕಚೇರಿ ಎದುರು ಪ್ರತಿಭಟನೆ ಮಾಡಲಾಗಿತ್ತು. ಹಣ ವಾಪಸು ಕೊಡಿಸುವುದಾಗಿ ಹೇಳಿ ಪೊಲೀಸರು ವಾಪಸು ಕಳುಹಿಸಿದ್ದರು. ಇವಾಗಲೂ ಅವರು ಅದೇ ಮಾತು ಹೇಳುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡಿದ್ದೇವೆ. ನಮ್ಮ ಹಣ ನಮಗೆ ಬೇಕು. ಅದು ಸಿಗುವವರೆಗೂ ಹೋರಾಟ ಮಾಡುತ್ತೇವೆ’ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.