ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಸ್ವಾಮಿ ಪಾಳ್ಯದ ಕಾರ್ಪೊರೇಟರ್ ನೇತ್ರಾವತಿ ಅವರ ಪತಿ ಕೃಷ್ಣೇಗೌಡ ಅವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಬುಧವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿತು.
ರಾಮಸ್ವಾಮಿ ಪಾಳ್ಯ ಬಿಬಿಎಂಪಿಯ 62ನೇ ವಾರ್ಡ್ ಆಗಿದ್ದು ಶಿವಾಜಿನಗರ ವಿಧಾನಸಭೆ ವ್ಯಾಪ್ತಿಗೆ ಸೇರಿದೆ. ಐಎಂಎ ಆರೋಪಿಗಳ ಜೊತೆ ರಾಮಸ್ವಾಮಿ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೃಷ್ಣೇಗೌಡರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಗುರುವಾರ ರೋಷನ್ ಬೇಗ್ ವಿಚಾರಣೆ: ಈ ಮಧ್ಯೆ, ಗುರುವಾರ ಬೆಳಿಗ್ಗೆ ವಿಚಾರಣೆಗಾಗಿ ಎಸ್ಐಟಿ ಮುಂದೆ ಶಿವಾಜಿ ನಗರದ ಶಾಸಕ ರೋಷನ್ ಬೇಗ್ ಹಾಜರಾಗಲಿದ್ದಾರೆ.
ವಿಚಾರಣೆಗೆ ಹಾಜರಾಗಲು ತಮಗೆ ಸ್ವಲ್ಪ ಕಾಲಾವಕಾಶ ನೀಡುವಂತೆ ಎಸ್ಐಟಿ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಅವರನ್ನು ಬೇಗ್ ಕೇಳಿದ್ದರು. ಆದರೆ, ಸಮಯಾವಕಾಶ ನೀಡಿಲ್ಲ ಎಂದು ಮೂಲಗಳು ಹೇಳಿವೆ.
‘ಕಾರಣಾಂತರಗಳಿಂದ ಗುರುವಾರ ತಮಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ,ಮುಂದಿನ ಸಲ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ಎಂದು ರೋಷನ್ಬೇಗ್ ಎಸ್ಐಟಿ ಮುಖ್ಯಸ್ಥರಿಗೆ ಬುಧವಾರ ಪತ್ರ ಬರೆದಿದ್ದರು.
ವಿಜಯಶಂಕರ್ ಅಮಾನತು ಶ್ರೀನಿವಾಸ್ ನೂತನ ಜಿಲ್ಲಾಧಿಕಾರಿ
ಐಎಂಎ ಸಮೂಹ ಕಂಪನಿಗೆ ‘ಕ್ಲೀನ್ ಚಿಟ್’ ನೀಡಲು ₹1.5 ಕೋಟಿ ಲಂಚ ಪಡೆದ ಆರೋಪದ ಮೇಲೆ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ನಗರ ಜಿಲ್ಲಾಧಿಕಾರಿಯಾಗಿ ಕೆ.ಶ್ರೀನಿವಾಸ್ ಅವರನ್ನು ಬುಧವಾರ ನೇಮಿಸಲಾಗಿದೆ.
ಜಿ. ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ರಾಯಚೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.