ಬೆಂಗಳೂರು: ಷೇರುದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಐಎಂಎ ಸಮೂಹ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಜೊತೆ ಸೇರಿ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಆಸ್ತಿ ಖರೀದಿಸಿದ ಫ್ರೇಜರ್ಟೌನ್ನ ರಾಬರ್ಟ್ಸನ್ ರಸ್ತೆಯ ನಿವಾಸಿ ಖಮರುಲ್ಲಾ ಜಮಾಲ್ (40) ಎಂಬಾತನನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮನ್ಸೂರ್ ಖಾನ್ ಆಸ್ತಿ ಖರೀದಿಸಲು ಆತನ ಸ್ನೇಹಿತ, ಮಾಟ ಮಂತ್ರ ಹಾಗೂ ನಾಟಿ ವೈದ್ಯನಾಗಿದ್ದ ಖಮರುಲ್ಲಾ ಕೈಜೋಡಿಸಿರುವ ಸಂಗತಿ ತನಿಖೆಯಿಂದ ಎಸ್ಐಟಿಗೆ ಗೊತ್ತಾಗಿದೆ.
ಐಎಂಎ ಕಂಪನಿಯಲ್ಲಿ ಗ್ರಾಹಕರು ಹೂಡಿಕೆ ಮಾಡಿದ್ದ ಹಣವನ್ನು ಮನ್ಸೂರ್ನಿಂದ ಪಡೆದು ಮಾಲೂರಿನಲ್ಲಿ 1.5 ಎಕರೆ ಜಮೀನು ಖರೀದಿಸಿ, ಅಲ್ಲಿ ಸಿಮೆಂಟ್ ಬ್ಲಾಕ್ಗಳನ್ನು ತಯಾರಿಸುವ ಕಾರ್ಖಾನೆಯನ್ನು ಖಮರುಲ್ಲಾ ನಡೆಸುತ್ತಿದ್ದ. ಅಲ್ಲದೆ, ಹೂಡಿಕೆದಾರರಿಂದ ಮನ್ಸೂರ್ ಕೈ ಸೇರುತ್ತಿದ್ದ ಹಣವನ್ನು ರಹಸ್ಯವಾಗಿ, ಇದೇ ಉದ್ದೇಶಕ್ಕಾಗಿ ತಯಾರಿಸಲಾಗಿದ್ದ ಬಂಕರ್ಗಳಲ್ಲಿ ಮುಚ್ಚಿಡುತ್ತಿದ್ದ. ಅದನ್ನು ಕಾಯಲು ಗನ್ಮ್ಯಾನ್ಗಳನ್ನು ನೇಮಕ ಮಾಡಿಕೊಂಡಿದ್ದ. ಈ ಸ್ಥಳವನ್ನು ಪತ್ತೆ ಮಾಡಲಾಗಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದರು.
ಈ ಪ್ರಕರಣವನ್ನು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.