ADVERTISEMENT

ಸಚಿವ ಬೈರತಿ ಬಸವರಾಜು ವಿರುದ್ಧದ ವಿಚಾರಣೆ ಮಧ್ಯಂತರ ತಡೆ ವಿಸ್ತರಣೆ

ಕೆ.ಆರ್.ಪುರ ಹೋಬಳಿಯಲ್ಲಿನ ಭೂ ಕಬಳಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 20:12 IST
Last Updated 25 ಜನವರಿ 2022, 20:12 IST
ಸಚಿವ ಬೈರತಿ ಬಸವರಾಜ್
ಸಚಿವ ಬೈರತಿ ಬಸವರಾಜ್   

ಬೆಂಗಳೂರು: ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಬಸವರಾಜ್ ಮತ್ತು ಶಾಸಕ ಆರ್.ಶಂಕರ್ ವಿರುದ್ಧ ಅಧೀನ ನ್ಯಾಯಾಲಯದ ವಿಚಾರಣೆಗೆ ನೀಡಿದ್ದ ಮಧ್ಯಂತರ ತಡೆಯನ್ನು ಹೈಕೋರ್ಟ್‌ ಫೆಬ್ರುವರಿ ಎರಡನೇ ವಾರದವರೆಗೂ ವಿಸ್ತರಿಸಿದೆ.

’ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು‘ ಎಂದು ಕೋರಿ ಸಚಿವ ಬೈರತಿ ಬಸವರಾಜ್, ಶಾಸಕ ಆರ್.ಶಂಕರ್ ಮತ್ತು ಎ.ಎಂ. ಮಾದಪ್ಪ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಎಸ್‌. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠಈ ಮೇಲ್ಮನವಿ ವಿಚಾರಣೆ ನಡೆಸಿ ಈ ಮೊದಲು ಮಧ್ಯಂತರ ತಡೆ ನೀಡಿತ್ತು. ಮಂಗಳವಾರ ಪುನಃ ವಿಚಾರಣೆ ನಡೆಸಿದ ನ್ಯಾಯಪೀಠ ಫೆಬ್ರುವರಿ ಎರಡನೇ ವಾರಕ್ಕೆ ಮುಂದೂಡಿ ತಡೆ ವಿಸ್ತರಿಸಿ ಆದೇಶಿಸಿತು.

ADVERTISEMENT

ಪ್ರಕರಣವೇನು?:‘ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೇ ನಂಬರ್ 375/2ರಲ್ಲಿನ 22.43 ಎಕರೆ ಅದೂರ್ ಅಣ್ಣೈಯಪ್ಪ ಎಂಬುವವರಿಗೆ ಸೇರಿದ್ದು,2003ರ ಮೇ 21ರಂದು ಸಂಬಂಧಿಕರಾದ ಮಾದಪ್ಪ ಮತ್ತು ಪಿಳ್ಳಮಾದಪ್ಪ ಖಾಲಿ ಹಾಳೆಗಳ ಮೇಲೆ ಅದೂರ್ ಅಣ್ಣೈಯಪ್ಪ ಅವರ ಸಹಿ ಮತ್ತು ಹೆಬ್ಬೆಟ್ಟು ಗುರುತು ಪಡೆದುಕೊಂಡರು.ನಂತರ ಪಾಲುದಾರಿಕೆ ಕರಾರು ಸಿದ್ಧಪಡಿಸಿಕೊಂಡರು‘ ಎಂಬುದು ಆರೋಪ.

’ಈ 22.43 ಎಕರೆಯನ್ನುಬೈರತಿ ಬಸವರಾಜ್ ಅವರಿಗೆ 2003ರ ಮೇ 21ರಂದು ಅಕ್ರಮವಾಗಿ ಮಾರಾಟ ಮಾಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಡಲಾಗಿದೆ’ ಎಂದು ಆರೋಪಿಸಿ ಅಣ್ಣೈಯಪ್ಪ ಪುತ್ರ ಮಾದಪ್ಪ ಖಾಸಗಿ ದೂರು ದಾಖಲಿಸಿದ್ದರು.

ನಗರದ 42ನೇ ಎಸಿಎಂಎಂ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ 2021ರ ನವೆಂಬರ್ 5ರಂದು ಬೈರತಿ ಬಸವರಾಜ್, ಆರ್.ಶಂಕರ್, ಮಾದಪ್ಪ ಮತ್ತು ಪಿಳ್ಳಮಾದಪ್ಪ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.