ಹೆಸರಘಟ್ಟ: ಮೈಸೂರು ರಾಜರಾದ ಇಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಗೆ ಸಂಬಂಧಿಸಿದ ಶಿಲಾಶಾಸನವೊಂದು ಅರಕೆರೆ ಗ್ರಾಮದ ದೊಡ್ಡಕೆರೆ ಪೂರ್ವದಲ್ಲಿರುವ ಸಿಹಿನೀರಿನ ಬಾವಿಯ ಬಳಿ ಪತ್ತೆಯಾಗಿದೆ.
ಮಣ್ಣಿನಲ್ಲಿ ಅರ್ಧ ಹೂತು ಹೋಗಿದ್ದ ಶಾಸನವನ್ನು ಗ್ರಾಮದ ನಿವಾಸಿಯಾದ ನಾಗರಾಜಗೌಡ, ಇತಿಹಾಸ ತಜ್ಞರಾದ ಕೆ.ಆರ್.ನರಸಿಂಹನ್ ಹಾಗೂ ಕೆ.ಧನಪಾಲ್ ತಂಡವು ಹೊರ ತೆಗೆದು ರಕ್ಷಿಸುವ ಕೆಲಸ ಮಾಡಿದೆ. ಶಿಲಾಶಾಸನದಲ್ಲಿ ಒಟ್ಟು ಹನ್ನೆರಡು ಸಾಲುಗಳಿದ್ದು, 2 ಅಡಿ ಅಗಲ ಮತ್ತು 1.8 ಅಡಿ ಉದ್ದವಿದೆ. ’ಶಿಲಾಶಾಸನದಲ್ಲಿ 1750 ನೇ ಶುಕ್ಲ ಸಂವತ್ಸರದ ಫಾಲ್ಗುಣ ಎನ್ನುವ ಮಾಹಿತಿ ಇದೆ. ಶಿಲಾ ಶಾಸನದ ಕಲ್ಲು ತುಂಡಾಗಿರುವುದರಿಂದ ಮಾಹಿತಿ ಅಪೂರ್ಣವಾಗಿದೆ‘ ಎಂದು ಕೆ.ಆರ್.ನರಸಿಂಹನ್ ಅವರು ಹೇಳಿದರು.
‘ಕಲ್ಲು ಪೂರ್ಣವಾಗಿ ಲಭ್ಯವಾಗಿದ್ದರೆ ಬಹುಶಃ ಗ್ರಾಮದ ಬಗ್ಗೆ ಒಂದಿಷ್ಟು ಮಾಹಿತಿ ದೊರಕುತ್ತಿತ್ತು. 1750ರಲ್ಲಿ ಬಹುಶಃ ಈ ಗ್ರಾಮವು ಒಡೆಯರ್ ಆಳ್ವಿಕೆಗೆ ಒಳ ಪಟ್ಟಿರಬೇಕು. ಕಲ್ಲಿನ ತುಂಡಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದೇವೆ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.