ಬೆಂಗಳೂರು: ಸಿನಿಮಾಗಳಿಂದ ಪ್ರೇರಣೆಗೊಂಡು ಪ್ರೊಬೇಷನರಿ ಐಪಿಎಸ್ ಅಧಿಕಾರಿಯ ಸೋಗಿನಲ್ಲಿ ₹ 1.75 ಕೋಟಿ ವಂಚಿಸಿದ್ದ ಆರೋಪಿಯನ್ನು ತಲಘಟ್ಟಪುರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನಗರದ ಚಂದ್ರಾ ಲೇಔಟ್ನ ನೇತ್ರಾವತಿ ರಸ್ತೆಯ 5ನೇ ಕ್ರಾಸ್ ನಿವಾಸಿ ಆರ್.ಶ್ರೀವಿವಾಸ್ (34) ಬಂಧಿತ ಆರೋಪಿ. ಪ್ರೊಬೇಷನರಿ ಎಸ್ಪಿಯಾಗಿ ಕೆಲಸ ಮಾಡುತ್ತಿರುವುದಾಗಿ ಎಂದು ಹೇಳಿಕೊಂಡು ಓಡಾಡುತ್ತಿದ್ದ. ವೆಂಕಟರಮಣಪ್ಪ ಅವರನ್ನು ನಂಬಿಸಿ ಅವರಿಂದ ಹಣ ಸುಲಿಗೆ ಮಾಡಿದ್ದ.
‘ತಲಘಟ್ಟಪುರದಲ್ಲಿ ವೆಂಕಟರಮಣಪ್ಪ ಅವರ ಪರಿಚಯವಾಗಿತ್ತು. ಮೈಸೂರಿನಲ್ಲಿ ₹ 450 ಕೋಟಿ ಭೂಮಿ ವ್ಯವಹಾರವಿದ್ದು, ಅದರಲ್ಲಿ ನನಗೆ ₹ 250 ಕೋಟಿ ಸಿಗಲಿದೆ. ಸದ್ಯಕ್ಕೆ ಹಣ ಬೇಕಿದೆ ಎಂದು ಕೋರಿಕೆಯಿಟ್ಟಿದ್ದ. ಇದನ್ನು ನಂಬಿದ ವೆಂಕಟರಮಣಪ್ಪ ಅವರು ತಮ್ಮ ಬಳಿಯಿದ್ದ ₹ 49 ಲಕ್ಷವನ್ನು ನೀಡಿದ್ದರು. ಸ್ವಲ್ಪ ದಿನಗಳ ಬಳಿಕ ಆ ಹಣವನ್ನು ವಾಪಸ್ ಮಾಡಿದ್ದ. ಶ್ರೀನಿವಾಸ್ ವ್ಯವಹಾರ ನಂಬಿ, ಜಯನಗರದ ಸುಖಸಾಗರ್ ಹೋಟೆಲ್ ಮಾಲೀಕ ಅಭಿಷೇಕ್ ಪೂಜಾರಿಯಿಂದ₹ 1.20 ಕೋಟಿ ಹಾಗೂ ಇತರೆ ಸ್ನೇಹಿತರಿಂದ ₹ 56 ಲಕ್ಷ ಸಂಗ್ರಹಿಸಿ ಕೊಟ್ಟಿದ್ದರು. ಅದಾದ ಮೇಲೆ ಶ್ರೀನಿವಾಸ್ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ’ ಎಂದು ದೂರಿನಲ್ಲಿ ತಿಳಿಸಿದ್ದರು.
‘ನನ್ನಿಂದ ₹ 2.25 ಕೋಟಿ ಪಡೆದುಕೊಂಡಿದ್ದ. ಅದರಲ್ಲಿ ₹ 50 ಲಕ್ಷ ವಾಪಸ್ ಮಾಡಿದ್ದಾನೆ. ₹ 1.75 ಕೋಟಿ ನೀಡದೇ ಮೋಸ ಮಾಡಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದರು.
ಐಷಾರಾಮಿ ಜೀವನ: ‘ಆರೋಪಿ ಐಷಾರಾಮಿ ಜೀವನ ನಡೆಸುವ ಆಸೆ ಹೊಂದಿದ್ದ. ಸಿನಿಮಾಗಳಲ್ಲಿ ಬರುವ ಪೊಲೀಸ್ ಅಧಿಕಾರಿಗಳ ಪಾತ್ರವನ್ನು ನೋಡಿ ಅದನ್ನೇ ಅನುಕರಿಸಿ ಸುಲಭವಾಗಿ ಹಣ ಸಂಪಾದನೆ ಮಾಡಲು ಪೊಲೀಸ್ ಸಮವಸ್ತ್ರ ಧರಿಸಿಕೊಂಡಿದ್ದ. ಎಲ್ಲೆಡೆ ಐಪಿಎಸ್ ಅಧಿಕಾರಿಯೆಂದು ಹೇಳಿಕೊಳ್ಳುತ್ತಿದ್ದ. ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಸಾರ್ವಜನಿರಕನ್ನು ಪರಿಚಯಿಸಿಕೊಳ್ಳುತ್ತಿದ್ದ. ಪರಿಚಯವಾದವರಿಂದಲೂ ಹಣ ಪಡೆದುಕೊಳ್ಳುತ್ತಿದ್ದ’ ಎಂದು ಮೂಲಗಳು ತಿಳಿಸಿವೆ.
‘ವಂಚಿಸಿದ್ದ ಹಣದಲ್ಲಿ ಬೈಕ್ ಖರೀದಿಸಿ ತನ್ನ ಪ್ರೇಯಸಿ ರಮ್ಯಾ ಜತೆಗೆ ವಿಲಾಸಿ ಜೀವನ ನಡೆಸುತ್ತಿದ್ದ. ಅಲ್ಲದೇ, 2010ರಲ್ಲಿ ವಿಜಯನಗರ ಪೊಲೀಸ್ ಎರಡು ಕಾರುಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ’.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.