ನಗರದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿಜೇತ ಕಾಲೇಜುಗಳಿಗೆ ಅತ್ಯುತ್ತಮ ಸಂಶೋಧನಾ ಲೇಖನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು: ನಗರದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ‘ಭಾರತೀಯ ಸಾಹಿತ್ಯ: ಬಹುತ್ವದ ನೆಲೆಗಳು’ ಎಂಬ ವಿಷಯದ ಬಗ್ಗೆ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್. ಎಲ್.ಪುಷ್ಪಾ , ಸಾಹಿತಿಗಳಾದ ರಹಮತ್ ತರೀಕೆರೆ, ಕೆ. ವೈ. ನಾರಾಯಣಸ್ವಾಮಿ, ಬಂಜೆಗೆರೆ ಜಯಪ್ರಕಾಶ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಉಪನ್ಯಾಸ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಈರಯ್ಯ ಹಂಪಾಪುರ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪದವಿ ವಿದ್ಯಾರ್ಥಿಗಳು, ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳು, ಪಿಎಚ್.ಡಿ ಸಂಶೋಧಕರು ಹಾಗೂ ವಿವಿಧ ಕಾಲೇಜುಗಳ ಕನ್ನಡ ಅಧ್ಯಾಪಕರು ಪಾಲ್ಗೊಂಡಿದ್ದರು.
ನಾಲ್ಕು ವಿಭಾಗಗಳಲ್ಲಿ ಅತ್ಯುತ್ತಮ ಸಂಶೋಧನಾ ಲೇಖನ ಪ್ರಶಸ್ತಿ ನೀಡಲಾಯಿತು. ಕನ್ನಡ ಅಧ್ಯಾಪಕರ ವರ್ಗದ ಅತ್ಯುತ್ತಮ ಸಂಶೋಧನಾ ಲೇಖನ ಪ್ರಶಸ್ತಿಯನ್ನು ಕೋರಮಂಗಲದ ಸಂತ ಫ್ರಾನ್ಸಿಸ್ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಬಿ.ವಿ. ಜಗದೀಶ್ ಬಾಬು ಅವರ ‘ಎಲ್. ಹನುಮಂತಯ್ಯ ಅವರ ಕಾವ್ಯದಲ್ಲಿ ದಲಿತತ್ವದ ಸಾಂಸ್ಕೃತಿಕ ನೆಲೆಗಳು’ ಎಂಬ ಸಂಶೋಧನಾ ಲೇಖನಕ್ಕೆ ನೀಡಲಾಯಿತು.
ಸಮನಾಂತರ ಮತ್ತೊಂದು ಪ್ರಶಸ್ತಿಯನ್ನು ಬೆಂಗಳೂರಿನ ಆರ್ಬಿಎಎನ್ಎಂಎಸ್ ಕಾಲೇಜಿನ ನಾರಾಯಣ್ ಕ್ಯಾಸಂಬಳ್ಳಿ ಅವರ ‘ಬುಡಕಟ್ಟು ಸಂಸ್ಕೃತಿ ತಾತ್ವಿಕ ವಿಚಾರ’ ಎಂಬ ಸಂಶೋಧನಾ ಲೇಖನಕ್ಕೆ ನೀಡಲಾಯಿತು.
ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ‘ಅತ್ಯುತ್ತಮ ಸಂಶೋಧನಾ ಲೇಖನ ಪ್ರಶಸ್ತಿ’ಗಳನ್ನು ವಿಶ್ವವಿದ್ಯಾಲಯದ ಸಹಕುಲಪತಿ ಡಾ. ರೋನಾಲ್ಡ್ ಮಸ್ಕರೇನಸ್ ಅವರು ವಿಜೇತರಿಗೆ ನೀಡಿ ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.