ADVERTISEMENT

‘ಡಿ.ಕೆ.ಶಿವಕುಮಾರ್‌ ಏನು ಟಾಟಾ– ಬಿರ್ಲಾನಾ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 19:51 IST
Last Updated 10 ಫೆಬ್ರುವರಿ 2020, 19:51 IST

ಬೆಂಗಳೂರು:‘ಆರ್‌ಎಸ್‌ಎಸ್‌ನವರಿಗೆ ಊಟ ಹಾಕ್ತೀನಿ ಎನ್ನುವ ಡಿ.ಕೆ.ಶಿವಕುಮಾರ್‌ ಅವರು ಟಾಟಾನಾ– ಬಿರ್ಲಾನಾ’ ಎಂದು ಕಂದಾಯ ಸಚಿವ ಆರ್‌.ಅಶೋಕ ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಆರ್‌ಎಸ್‌ಎಸ್‌ನವರಿಗೆ ಊಟ ಹಾಕಿಸುತ್ತೇನೆ ಎಂದು ಶಿವಕುಮಾರ್ ಹೇಳಿದ್ದು ಅವರ ಅಹಂಕಾರದ ಪರಮಾವಧಿ. ಸಂಘ ಪರಿವಾರದವರಿಗೆ ಊಟ ಹಾಕಿಸುವ ಅಗತ್ಯವೂ ಇಲ್ಲ ಮತ್ತು ಡಿ.ಕೆಗೆ ನೈತಿಕತೆಯೂ ಇಲ್ಲ’ ಎಂದರು.

‘ಊಟ ಹಾಕಿಸುವುದಿದ್ದರೆ, ಕಾಂಗ್ರೆಸ್‌ನಲ್ಲಿ ನಿರ್ಗತಿಕರಾಗಿರುವ ಬಹಳಷ್ಟು ನಾಯಕರಿದ್ದಾರೆ. ಫುಟ್‌ಪಾತ್‌ ಆಗಿರುವ ಅಂತಹ ನಾಯಕರಿಗೆ ಊಟ ಹಾಕಿಸಲಿ’ ಎಂದು ಅಶೋಕ ತರಾಟೆಗೆ ತೆಗೆದುಕೊಂಡರು.

ADVERTISEMENT

‘ರಾಮನಗರ ಜಿಲ್ಲೆಯಲ್ಲಿ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಇದರಿಂದ ಡಿ.ಕೆ.ಶಿವಕುಮಾರ್‌ ಹೆದರಿದ್ದಾರೆ. ಅವರಿಗೆ ಉಳಿದಿರುವುದು ಕನಕಪುರ ಕ್ಷೇತ್ರ ಮಾತ್ರ. ಅದನ್ನು ಉಳಿಸಿಕೊಳ್ಳಲಿ. ರಾಮನಗರದಲ್ಲಿ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು ಮಾತನಾಡಿರುವುದು ಸರಿಯಾಗಿಯೇ ಇದೆ’ ಎಂದರು.

‘ಕಪಾಲ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ಹೆಚ್ಚಾಗಿದೆ. ಒಂದೇ ಕೋಮಿಗೆ ಸೇರಿದವರಿಗೆ ಬೇಕಾಬಿಟ್ಟಿ ಜಮೀನು ಹಂಚಲಾಗಿದೆ. ಸರ್ಕಾರಿ ಭೂಮಿ ಲಪಟಾಯಿಸುವ ಪ್ರಯತ್ನವೂ ನಡೆದಿದೆ’ ಎಂದೂ ಅಶೋಕ ತಿಳಿಸಿದರು.

‘ನಾವು ಮುನೇಶ್ವರನ ಆರಾಧಕರು. ಮುನೇಶ್ವರ ಬೆಟ್ಟವನ್ನು ಉಳಿಸಿಕೊಳ್ಳಬೇಕಾಗಿದೆ. ಶಿವಕುಮಾರ್‌ ಅವರೂ ಮುನೇಶ್ವರನ ಭಕ್ತರೇ ಆಗಿದ್ದಾರೆ. ಮುನೇಶ್ವರ ಬೆಟ್ಟ ಉಳಿಸಿಕೊಳ್ಳುವ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.