ಬೆಂಗಳೂರು: ಬಿಎಂಟಿಸಿ ನಿರ್ವಾಹಕ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ 371 ಜೆ (ಕಲ್ಯಾಣ ಕರ್ನಾಟಕ) ಮೀಸಲಾತಿಯಡಿ 212 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವರಿಗೆ ಶನಿವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇಮಕಾತಿ ಆದೇಶಪತ್ರ ವಿತರಿಸಿದರು.
ಬಿಎಂಟಿಸಿಯಲ್ಲಿ 2,500 ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ 214 ಹುದ್ದೆಗಳು 371 ‘ಜೆ’ಗೆ ಮೀಸಲಾಗಿದ್ದವು. 5,410 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 1334 ಅಭ್ಯರ್ಥಿಗಳು ನಿಗದಿತ ಅಂಕಕ್ಕಿಂತ ಅಧಿಕ ಗಳಿಸಿದ್ದರು. ಮೂಲದಾಖಲೆ ಪರಿಶೀಲನೆ, ದೇಹದಾರ್ಢ್ಯ ಪರೀಕ್ಷೆಯ ಬಳಿಕ 212 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಸರ್ಕಾರವು ವಿವಿಧ ನಿಗಮಗಳಲ್ಲಿ 9000 ಹೊಸ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದೆ. ಈಗಾಗಲೇ ಬಿಎಂಟಿಸಿಯಲ್ಲಿ 2,500 ನಿರ್ವಾಹಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೊನೆಗೊಂಡಿದ್ದು, ನೇಮಕಗೊಂಡವರಿಗೆ ಸದ್ಯದಲ್ಲಿಯೇ ನೇಮಕಾತಿ ಆದೇಶ ನೀಡಲಾಗುವುದು. ಕೆಎಸ್ಆರ್ಟಿಸಿಯಲ್ಲಿ 2,000 ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ1000 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಒಟ್ಟು 5,400 ಹುದ್ದೆಗಳ ನೇಮಕಾತಿ ವಿವಿಧ ಹಂತದಲ್ಲಿದೆ. 1,000 ಅನುಕಂಪ ಆಧಾರದ ನೌಕರಿ ನೀಡಲಾಗಿದೆ. ಒಟ್ಟು ಹುದ್ದೆಗಳ ನೇಮಕಾತಿ 10,000 ಆಗಲಿದೆ ಎಂದು ವಿವರ ನೀಡಿದರು.
‘ನಮ್ಮ ಸರ್ಕಾರದ ಅವಧಿಯಲ್ಲಿ 4,400 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ. ಉಳಿದ ಬಸ್ಸುಗಳು ಶೀಘ್ರದಲ್ಲಿಯೇ ಸೇರ್ಪಡೆಯಾಗಲಿದೆ. ಶಕ್ತಿ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಒಟ್ಟು 344.06 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್., ನಿರ್ದೇಶಕ (ಭದ್ರತಾ ಮತ್ತು ಜಾಗೃತ) ಅಬ್ದುಲ್ ಅಹದ್, ನಿರ್ದೇಶಕಿ (ಮಾಹಿತಿ ತಂತ್ರಜ್ಞಾನ) ಶಿಲ್ಪಾ ಎಂ., ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.