ಬೆಂಗಳೂರು: ಐಟಿ ಕಂಪನಿ ಉದ್ಯೋಗಿ, ಆಂಧ್ರಪ್ರದೇಶದ ಅನಂತಪುರ ನಿವಾಸಿ ರಕ್ಷಿತಾ (24) ಎಂಬುವವರು ತಾನು ನೆಲೆಸಿದ್ದ ಪೇಯಿಂಗ್ ಗೆಸ್ಟ್ಹೌಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿ.ಎಸ್ಸಿ ಮುಗಿಸಿರುವ ರಕ್ಷಿತಾ ಎರಡು ವರ್ಷಗಳ ಹಿಂದೆ ಇನ್ಫೊಸಿಸ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಕೋನಪ್ಪನ ಅಗ್ರಹಾರದಲ್ಲಿ ವಾಸವಿದ್ದರು. ‘ಕಾರ್ತಿಕ್ ಶ್ರೀನಿಧಿ ಎಂಬಾತನ ಜೊತೆ ರಕ್ಷಿತಾಗೆ ಸ್ನೇಹವಿತ್ತು. ಆದರೆ, ಆತ ಬೇರೆ ಯುವತಿಯರ ಜೊತೆಗೂ ಸಂಪರ್ಕ ಇಟ್ಟುಕೊಂಡಿದ್ದ. ಇದಕ್ಕೆ ರಕ್ಷಿತಾ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವೂ ಆಗಿತ್ತು. ಮಾನಸಿಕ ಖಿನ್ನತೆಯಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರಬೇಕು’ ಎಂದು ಪೊಲೀಸರು ತಿಳಿಸಿದರು.
‘ಸ್ನೇಹಿತರಾಗಿದ್ದ ನಾವಿಬ್ಬರೂ, ದಿನಾ ಫೋನ್ನಲ್ಲಿ ಮಾತನಾಡುತ್ತಿದ್ದೆವು. ಇದೇ 25ರಂದು ರಾತ್ರಿ 10 ಗಂಟೆವರೆಗೂ ಮಾತನಾಡಿದ್ದೆವು.
ರಾತ್ರಿ 11.20ಕ್ಕೆ ಮತ್ತೆ ಕರೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ತಕ್ಷಣ ನಾನು ಆಕೆ ನೆಲೆಸಿದ್ದ ಪೇಯಿಂಗ್ ಗೆಸ್ಟ್ಹೌಸ್ಗೆ ಹೋಗಿ
ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿದ್ದೆ. ಅವರು ಹೋಗಿ ನೋಡಿದಾಗ ಆಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಮಾರ್ಗ ಮಧ್ಯೆ ಸಾವು ಸಂಭವಿಸಿದೆ’ ಎಂದು ಪೊಲೀಸರಿಗೆ ಕಾರ್ತಿಕ್ ಹೇಳಿಕೆ ನೀಡಿದ್ದಾರೆ.
ರಕ್ಷಿತಾ ಅವರ ತಂದೆ ತಿಮ್ಮಯ್ಯ ಅವರು ನೀಡಿದ ದೂರಿನ ಅನ್ವಯ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಕಾರ್ತಿಕ್ ವಿರುದ್ಧ ಎಲೆಕ್ಟ್ರೋನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.