
ಕೆ.ಆರ್.ಪುರ: ‘ಖರೀದಿಸಿದ್ದ ನಿವೇಶನದಲ್ಲಿ ಮನೆ ನಿರ್ಮಿಸಲು ಅಡ್ಡಿಪಡಿಸಿದ್ದಾರೆ’ ಎನ್ನುವ ಕಾರಣಕ್ಕೆ ನೊಂದು ಐ.ಟಿ ಕಂಪನಿ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್ಫೀಲ್ಡ್ ಪೋಲಿಸ್ ಠಾಣೆ ವ್ಯಾಪ್ತಿಯ ನಲ್ಲೂರಹಳ್ಳಿ ಬಳಿ ನಡೆದಿದೆ.
ಮುರುಳಿ (45) ಆತ್ಮಹತ್ಯೆ ಮಾಡಿಕೊಂಡವರು. ಈ ಘಟನೆ ಸಂಬಂಧ ಉಷಾ ನಂಬಿಯಾರ್ ಹಾಗೂ ಶಶಿ ನಂಬಿಯಾರ್ ಎಂಬುವರನ್ನು ಬಂಧಿಸಲಾಗಿದೆ.
ಉಷಾ ನಂಬಿಯಾರ್ ಹಾಗೂ ಶಶಿ ನಂಬಿಯಾರ್ ಅವರ ಸಂಬಂಧಿಯೊಬ್ಬರಿಂದ 2018ರಲ್ಲಿ ಮುರುಳಿ ಅವರು ನಿವೇಶನ ಖರೀದಿಸಿದ್ದರು. ಅದೇ ನಿವೇಶನದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದರು. ಮನೆ ಪಕ್ಕದಲ್ಲಿಯೇ ನೆಲಸಿದ್ದ ಉಷಾ ಹಾಗೂ ಶಶಿ ಅವರು ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಂಬಂಧಿಕರು ದೂರಿದ್ದಾರೆ.
‘ಹಣ ಕೊಡಲು ನಿರಾಕರಿಸಿದ್ದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರಿಗಳ ಜೊತೆಗೂಡಿ ಆರೋಪಿಗಳು, ಮನೆ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದರು. ಇದರಿಂದ ನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮುರುಳಿ ಅವರ ತಾಯಿ ದೂರು ನೀಡಿದ್ದಾರೆ. ದೂರು ಆಧರಿಸಿ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.