ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 96 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಯಾವುದೇ ಕಾರ್ಯಕ್ರಮ ಆಯೋಜಿಸದೇ ಕೈದಿಗಳಿಗೆ ಹೂವು ಕೊಟ್ಟು ಬೀಳ್ಕೊಡಲಾಯಿತು.
ಜೈಲಿನ ಅಧಿಕಾರಿಗಳೇ ಕೈದಿಗಳಿಗೆ ಬಿಡುಗಡೆ ಪ್ರಮಾಣಪತ್ರಗಳನ್ನು ವಿತರಿಸಿ, ಜೈಲಿನಿಂದ ಕಳುಹಿಸಿಕೊಟ್ಟರು. ಕುಟುಂಬಸ್ಥರು ಹಾಗೂ ಸ್ನೇಹಿತರು, ಜೈಲಿನ ಬಳಿ ಕೈದಿಗಳನ್ನು ಸ್ವಾಗತಿಸಿದರು. ಕೆಲವರು, ಕೈದಿಗಳನ್ನು ತಬ್ಬಿಕೊಂಡು ಕಣ್ಣೀರಿಟ್ಟರು.
ಜೈಲಿನಲ್ಲಿ ಉತ್ತಮ ನಡತೆ ತೋರಿದ್ದ ಅರ್ಹ ಕೈದಿಗಳ ಬಿಡುಗಡೆಗಾಗಿ ಕಾರಾಗೃಹಗಳ ಸ್ಥಾಯಿ ಸಲಹಾ ಮಂಡಳಿಗಳ ವರದಿ ಸಮೇತ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು. ಕೈದಿಗಳ ಬಿಡುಗಡೆಗೆ ಅನುಮೋದನೆ ನೀಡಿದ್ದ ಸರ್ಕಾರ, ರಾಜ್ಯಪಾಲರಿಗೆ ಪಟ್ಟಿ ಕಳುಹಿಸಿತ್ತು. ಅದನ್ನು ಪರಿಶೀಲಿಸಿದ್ದ ರಾಜ್ಯಪಾಲರು, 96 ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಿದ್ದರು.
ಯೋಗ ಶಿಕ್ಷಕ: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ 45 ಕೈದಿಗಳು ಏಕಕಾಲದಲ್ಲಿ ಬಿಡುಗಡೆಯಾದರು.
‘ಜೈಲು ಮನಪರಿವರ್ತನೆ ಸ್ಥಳ. ಬಿಡುಗಡೆಯಾದ ಕೈದಿಯೊಬ್ಬ, ಜೈಲಿನಲ್ಲೇ ಯೋಗ ಕಲಿತು ಶಿಕ್ಷಕನಾಗಿದ್ದಾನೆ. ಕೆಲವರು ಪದವಿ ಪೂರ್ಣಗೊಳಿಸಿದ್ದಾರೆ. ಎಲ್ಲರೂ ಇದೀಗ ಜೈಲಿನಿಂದ ಬಿಡುಗಡೆ ಆಗಿದ್ದು, ಅವರೆಲ್ಲರ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಿದ್ದೇವೆ’ ಎಂದು ಜೈಲಿನ ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.