ಬೆಂಗಳೂರು: ‘ಜೈನ ಸಾಹಿತ್ಯವು ವಿವಿಧ ಆಯಾಮಗಳಲ್ಲಿ ಹೊಸತನ ನೀಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದು, ಜೈನ ಚರಿತ್ರೆಯ ಬಗ್ಗೆ ಅಧ್ಯಯನ ಹೆಚ್ಚಬೇಕು’ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಮತ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಇತಿಹಾಸ ತಜ್ಞ ಪ್ರೊ.ಜೀವಂಧರಕುಮಾರ್ ಕೆ. ಹೋತಪೇಟೆ ಅವರಿಗೆ ‘ಚಾವುಂಡರಾಯ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿ ₹30ಸಾವಿರ ನಗದು ಬಹುಮಾನ ಹೊಂದಿದೆ. ‘ಸಕಲ ಜೀವ ರಾಶಿಗಳನ್ನು ಸಮಾನವಾಗಿ ಕಾಣುವುದೇ ಜೈನ ಧರ್ಮದ ಮೂಲ ಮಂತ್ರ.ಅನೇಕ ಜೈನ ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ’ ಎಂದು ನಾಗಾಭರಣ ತಿಳಿಸಿದರು.
ಪ್ರೊ.ಜೀವಂಧರಕುಮಾರ್ ಕೆ. ಹೋತಪೇಟೆ, ‘ಚಾವುಂಡರಾಯನ ಬಗೆಗೆ ಕೃತಿ ರಚಿಸಲು ಚಾರುಕೀರ್ತಿ ಸ್ವಾಮೀಜಿ ಪ್ರೋತ್ಸಾಹಿಸಿದರು. ಇದರಿಂದಾಗಿಯೇಜೈನ ಧರ್ಮದ ಬಗೆಗೆ ಹಲವು ಕೃತಿ ರಚಿಸಲು ಸಾಧ್ಯ ವಾಯಿತು.ಚಾವುಂಡರಾಯ ಪುಸ್ತಕದ ಕತೆ ಇಟ್ಟುಕೊಂಡು ನಾಗಾಭರಣ ಅವರು ಚಲನಚಿತ್ರ ನಿರ್ಮಾಣ ಮಾಡಿದಲ್ಲಿ ಜೈನ ಧರ್ಮದ ಬಗ್ಗೆ ಜನರಿಗೆ ಮಾಹಿತಿ ತಿಳಿಯಲಿದೆ’ ಎಂದರು.
ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ‘ಚಾವುಂಡರಾಯ ದತ್ತಿ ಪ್ರಶಸ್ತಿಗೆ
₹ 6 ಲಕ್ಷ ಮೀಸಲಿಟ್ಟಿದ್ದು, ಇನ್ನೂ ₹2 ಲಕ್ಷ ಮೀಸಲಿಡಲು ಚಿಂತಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.