ಬೆಂಗಳೂರು: ಸಿಟಿ ಮಾರುಕಟ್ಟೆ ಠಾಣೆ ವ್ಯಾಪ್ತಿಯ ಆಭರಣ ಮಳಿಗೆಯೊಂದರಲ್ಲಿ ಕಳವು ಮಾಡಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
‘ಬಿಖಾರಾಮ್ ದೇವಸಿ, ಅಮರ್ ಸಿಂಗ್ ಹಾಗೂ ಉತ್ತಮ್ ರಾಣಾ ಬಂಧಿತರು. ಅವರಿಂದ ₹ 40.25 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.
‘ಪ್ರವೀಣ್ ಎಂಬುವರಿಗೆ ಸೇರಿದ್ದ ಆಭರಣ ಮಳಿಗೆಯಲ್ಲಿ ಕಳೆದ ಅಕ್ಟೋಬರ್ 29ರಂದು ಕಳ್ಳತನ ಆಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಆರೋಪಿಗಳ ಕೃತ್ಯವೂ ಸೆರೆಯಾಗಿತ್ತು. ಮೊಬೈಲ್ ಕರೆಗಳ ವಿವರ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.
ಹಗಲಿನಲ್ಲಿ ಮಳಿಗೆ ಗುರುತು: ‘ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳು, ಈ ಹಿಂದೆಯೂ ಹಲವೆಡೆ ಕೃತ್ಯ ಎಸಗಿರುವ ಮಾಹಿತಿ ಇದೆ. ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಆಭರಣ ಮಳಿಗೆ ಹೆಚ್ಚಿರುವ ಕಡೆಗಳಲ್ಲಿ ಹಗಲಿನಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಕಳ್ಳತನ ಮಾಡಬೇಕಾದ ಮಳಿಗೆಯನ್ನು ಗುರುತು ಮಾಡುತ್ತಿದ್ದರು. ಮೂರ್ನಾಲ್ಕು ದಿನ ಹಗಲು ಹಾಗೂ ರಾತ್ರಿ ಸಂದರ್ಭದಲ್ಲಿ ಮಳಿಗೆ ಸಮೀಪದಲ್ಲೇ ಓಡಾಡಿ, ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದರು. ನಿಗದಿತ ದಿನದಂತೆ ಮಳಿಗೆ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು’ ಎಂದೂ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.