ADVERTISEMENT

ಚಂದ್ರು ಕೊಲೆ ಪ್ರಕರಣ: ಸಿಐಡಿಗೆ ಕಡತ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 16:56 IST
Last Updated 12 ಏಪ್ರಿಲ್ 2022, 16:56 IST
ಚಂದ್ರಶೇಖರ್
ಚಂದ್ರಶೇಖರ್   

ಬೆಂಗಳೂರು: ಜಗಜೀವನ್‌ರಾಮ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರಶೇಖರ್ (22) ಕೊಲೆ ಪ್ರಕರಣದ ತನಿಖಾ ಕಡತಗಳನ್ನು ಸಿಐಡಿ ಅಧಿಕಾರಿಗಳಿಗೆ ಸೋಮವಾರ ಹಸ್ತಾಂತರಿಸಲಾಗಿದೆ.

‘ಐಟಿಐ ಫಿಟ್ಟರ್’ ಕೋರ್ಸ್ ಮುಗಿಸಿದ್ದ ಚಂದ್ರಶೇಖರ್, ಏಪ್ರಿಲ್ 4ರಂದು ಸ್ನೇಹಿತನ ಜೊತೆ ಹಳೇ ಗುಡ್ಡದಹಳ್ಳಿ ಬಳಿ ಹೊರಟಿದ್ದರು. ಅದೇ ವೇಳೆ ಗಲಾಟೆ ಆಗಿ, ಚಂದ್ರಶೇಖರ್ ಕೊಲೆ ಆಗಿತ್ತು.

‘ಬೈಕ್‌ಗಳು ಪರಸ್ಪರ ತಗುಲಿದ್ದ ಕಾರಣಕ್ಕೆ ಗಲಾಟೆಯಾಗಿ ಚಂದ್ರಶೇಖರ್ ಕೊಲೆ ಆಗಿದೆ. ಮೂವರನ್ನು ಬಂಧಿಸಲಾಗಿದೆ’ ಎಂದು ಕಮಿಷನರ್ ಕಮಲ್ ಪಂತ್ ಹೇಳಿದ್ದರು.

ADVERTISEMENT

‘ಉರ್ದು ಮಾತನಾಡದಿದ್ದಕ್ಕೆ ಕೊಲೆ ಆಗಿದೆ’ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಬಳಿಕ ಹಿಂಪಡೆದಿದ್ದರು. ಅದೇ ಹೇಳಿಕೆಯನ್ನೇ ಪುನಃ ಪ್ರಸ್ತಾಪಿಸಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್, ‘ಉರ್ದು ಮಾತನಾಡದಿದ್ದಕ್ಕೆ ಕೊಲೆ ಆಗಿದೆ. ಕಮಿಷನರ್ ಸುಳ್ಳು ಹೇಳಿದ್ದಾರೆ’ ಎಂದು ದೂರಿದ್ದರು.

ಕೊಲೆ ಕಾರಣದ ಬಗ್ಗೆ ಗೊಂದಲಗಳು ಸೃಷ್ಟಿಯಾಗಿದ್ದರಿಂದ ಪ್ರಕರಣವನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ. ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು, ಕೊಲೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಪೊಲೀಸರಿಂದಲೂ ಕಡತಗಳನ್ನು ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ಘಟನಾ ಸ್ಥಳಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.