ADVERTISEMENT

ನ್ಯಾಯಮೂರ್ತಿ ಪದ ಪ್ರಾಮಾಣಿಕತೆಯ ಪ್ರತಿರೂಪ: ಸುಧೀಂದ್ರರಾವ್‌

ನ್ಯಾಯಮೂರ್ತಿ ಎನ್‌.ಕೆ.ಸುಧೀಂದ್ರರಾವ್‌ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 16:34 IST
Last Updated 3 ಡಿಸೆಂಬರ್ 2021, 16:34 IST

ಬೆಂಗಳೂರು: ‘ಯಾವುದೇ ನ್ಯಾಯಮೂರ್ತಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಹೇಳುವ ಅಗತ್ಯವಿಲ್ಲ. ಯಾಕೆಂದರೆ, ನ್ಯಾಯಮೂರ್ತಿ ಎಂಬ ಪದವೇ ಪ್ರಾಮಾಣಿಕತೆಯ ಮತ್ತೊಂದು ಜೀವಂತ ರೂಪ ಎಂದು’ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌.ಕೆ.ಸುಧೀಂದ್ರರಾವ್‌ ಬಣ್ಣಿಸಿದರು.

ತಮ್ಮ ನಿವೃತ್ತಿ ದಿನವಾದ ಶುಕ್ರವಾರ ಬೆಂಗಳೂರು ವಕೀಲರ ಸಂಘದ ವತಿಯಿಂದ ನೀಡಲಾದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ‘ನ್ಯಾಯಮೂರ್ತಿಗಳ ಪ್ರಾಮಾಣಿಕತೆ ಎಂಬುದು ಗಣಿತದ ಲೆಕ್ಕಾಚಾರದಂತೆ ಇರಬೇಕು. ಅವರು ಶೇಕಡ 99ರಷ್ಟು ಪ್ರಾಮಾಣಿಕರಾಗಿದ್ದರು ಎಂದು ಹೇಳುವ ಬದಲಿಗೆ ಶೇ100ರಷ್ಟು ಪ್ರಾಮಾಣಿಕವಾಗಿ ಇರುವುದೇ ನಿಜವಾದ ನ್ಯಾಯಮೂರ್ತಿಯ ಲಕ್ಷಣ’ ಎಂದರು.

ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಮಾತನಾಡಿ, ‘ಸುಧೀಂದ್ರ ರಾವ್ ಅವರು ಬೆಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ರಾಜಕಾರಣಿಗಳು ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಅವರು ನ್ಯಾಯಾಧೀಶರಾಗಿ ಜಾತೀಯತೆ ಮತ್ತು ಭ್ರಷ್ಟಾಚಾರದ ಕಡು ವಿರೋಧಿಯಾಗಿದ್ದರು. ಯಾರಿಗೂ ಜಾತಿ, ಮತಗಳ ಆಧಾರದಲ್ಲಿ ಮಣೆ ಹಾಕದೆ ಕಠಿಣವಾದ ತೀರ್ಪುಗಳನ್ನು ನೀಡಿದ್ದಾರೆ’ ಎಂದು ಶ್ಲಾಘಿಸಿದರು.

ADVERTISEMENT

ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ಮಾತನಾಡಿ, ‘ಸುಧೀಂದ್ರರಾವ್‌ ನ್ಯಾಯಾಂಗದ ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿದ ನ್ಯಾಯಮೂರ್ತಿ’ ಎಂದರು.

ಅಡ್ವೊಕೇಟ್ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಮಾತನಾಡಿದರು. ಖಜಾಂಚಿ ಶಿವಮೂರ್ತಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ.ನರಗುಂದ, ಸಹಾಯಕ ಸಾಲಿಸಿಟರ್‌ ಜನರಲ್‌ ಶಾಂತಿಭೂಷಣ್‌, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅರುಣ್ ಶ್ಯಾಮ್ ಹಾಗೂ ಹಿರಿಯ–ಕಿರಿಯ ವಕೀಲರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.