ಹೈಕೋರ್ಟ್
ಬೆಂಗಳೂರು: ‘ಯಾವುದೇ ಆರೋಪಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಲು ಎಷ್ಟು ಆದ್ಯತೆ ನೀಡಲಾಗುತ್ತದೆಯೋ ಅಷ್ಟೇ ಸರಿಸಮಾನವಾಗಿ ರಾಷ್ಟ್ರೀಯ ಪ್ರಜ್ಞೆಯ ವಿಷಯ ಬಂದಾಗ ಎನ್ಐಎ ಕರ್ತವ್ಯಪ್ರಜ್ಞೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಎನ್ಐಎ ಪರ ವಕೀಲರು ಹೈಕೋರ್ಟ್ಗೆ ಅರುಹಿದರು.
ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಸುಟ್ಟ ಪ್ರಕರಣದಲ್ಲಿ 6ನೇ ಆರೋಪಿಯಾಗಿರುವ ನಗರದ ಬೈರಪ್ಪನ ಲೇಔಟ್ ನಿವಾಸಿ ಜಿಯಾ ಉರ್ ರಹಮಾನ್ ಆಲಿಯಾಸ್ ಜಿಯಾ ಅವರು ವೈದ್ಯಕೀಯ ಚಿಕಿತ್ಸೆ ಆಧಾರದಲ್ಲಿ ಕೋರಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಎನ್ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್ ‘ಮೇಲ್ಮನವಿದಾರರು ಸಾಮಾನ್ಯ ಕಾಯಿಲೆಯ ನೆಪದಲ್ಲಿ ನಾಲ್ಕನೇ ಬಾರಿಗೆ ವೈದ್ಯಕೀಯ ನೆರವಿನಲ್ಲಿ ಜಾಮೀನು ಕೋರುತ್ತಿದ್ದಾರೆ. ಹಿಂದಿನ ಮೂರು ಬಾರಿ ಎನ್ಐಎ ಆಕ್ಷೇಪ ವ್ಯಕ್ತಪಡಿಸಿಲ್ಲ. ಇಂತಹ ಚಾಳಿ ಮುಂದುವರಿಸಲು ಅವಕಾಶ ನೀಡದೆ ಮೆರಿಟ್ ಮೇಲೆ ವಿಚಾರಣೆ ನಡೆಸಬೇಕು’ ಎಂದು ಕೋರಿದರು.
ಒಂದು ಹಂತದಲ್ಲಿ ಜಾಮೀನು ನೀಡಲು ಮುಂದಾಗಿದ್ದ ನ್ಯಾಯಪೀಠ ಎನ್ಐಎ ಆಕ್ಷೇಪವನ್ನು ಗಂಭೀರವಾಗಿ ಪರಿಗಣಿಸಿ ಮೆರಿಟ್ ಮೇಲೆ ವಾದ ಮಂಡಿಸಲು ಮೇಲ್ಮನವಿದಾರ ಪರ ವಕೀಲರಿಗೆ ಸೂಚಿಸಿ ಜಾಮೀನು ಅವಧಿಯನ್ನು ಇದೇ 24ರವರೆಗೆ ಮುಂದುವರಿಸಿತು. ಅಂತೆಯೇ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.