ADVERTISEMENT

ಬಿಡಿಎಗೆ ₹12.43 ಲಕ್ಷ ದಂಡ ವಿಧಿಸಿದ ಕೆ–ರೇರಾ

ಹಿರಿಯ ನಾಗರಿಕರೊಬ್ಬರಿಗೆ ನಿವೇಶನ ಹಸ್ತಾಂತರ ವಿಳಂಬ

ಕೆ.ಎಸ್.ಸುನಿಲ್
Published 5 ಮಾರ್ಚ್ 2025, 20:38 IST
Last Updated 5 ಮಾರ್ಚ್ 2025, 20:38 IST
<div class="paragraphs"><p>ಬಿಡಿಎ</p></div>

ಬಿಡಿಎ

   

ಬೆಂಗಳೂರು: ಹಿರಿಯ ನಾಗರಿಕರೊಬ್ಬರಿಗೆ ನಿವೇಶನ ಹಸ್ತಾಂತರ ವಿಳಂಬ ಮಾಡಿದ ಕಾರಣಕ್ಕೆ ₹12.43 ಲಕ್ಷ ದಂಡ ಪಾವತಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಕರ್ನಾಟಕ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ಕೆ–ರೇರಾ) ಆದೇಶಿಸಿದೆ.

ಅರ್ಕಾವತಿ ಬಡಾವಣೆ ಯೋಜನೆಯನ್ನು 'ರೇರಾ' ಕಾಯ್ದೆಯಡಿ 2023ರ ನವೆಂಬರ್‌ನಲ್ಲಿಯೇ ನೋಂದಣಿ ಮಾಡಬೇಕೆಂದು ಸೂಚಿಸಿದ್ದರೂ ನೋಂದಣಿ ಮಾಡಿಲ್ಲ. ಹಾಗಾಗಿ ಕೂಡಲೇ ನೋಂದಣಿ ಮಾಡುವಂತೆ ಪ‍್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

ADVERTISEMENT

ಫೆಬ್ರುವರಿ 13ರಂದು ರೇರಾ ಅಧ್ಯಕ್ಷ ರಾಕೇಶ್ ಸಿಂಗ್ ಮತ್ತು ಸದಸ್ಯ ಜಿ.ರವೀಂದ್ರನಾಥ ರೆಡ್ಡಿ ಅವರು ಈ ಆದೇಶ ಹೊರಡಿಸಿದ್ದಾರೆ.

ರೇರಾ ಕಾಯ್ದೆ ಸೆಕ್ಷನ್ 31ರ ಅಡಿ ಬಿಡಿಎ ಆಯುಕ್ತರ ವಿರುದ್ಧ ವಿದ್ಯಾರಣ್ಯಪುರ ನಿವಾಸಿ, ನಿವೃತ್ತ ಲೆಕ್ಕಪರಿಶೋಧಕ ಸುತಂತಿರಾಜ್ ಅವರು ಕೆ–ರೇರಾಕ್ಕೆ ದೂರು ಸಲ್ಲಿಸಿದ್ದರು.

2006ರಲ್ಲಿ ಸುತಂತಿರಾಜ್‌ ಅವರು ಬೆಂಗಳೂರು ಪೂರ್ವದ ಅರ್ಕಾವತಿ ಬಡಾವಣೆಯ ಅಮಾನಿ ಬೈರತಿಖಾನೆಯ 18ನೇ ಬ್ಲಾಕ್ ನಲ್ಲಿ 60 ಅಡಿ x 40 ಅಡಿ ನಿವೇಶನವನ್ನು ₹7,50,100ಕ್ಕೆ ಖರೀದಿಸಿದ್ದರು. ನಿವೇಶನ ಸಂಖ್ಯೆ 358ಕ್ಕೆ ಸಂಬಂಧಿಸಿದ ಕ್ರಯಪತ್ರ 2017ರ ಜನವರಿ 2ರಂದು ನೋಂದಣಿ ಆಗಿತ್ತು. ಕ್ರಯಪತ್ರ ನೋಂದಣಿಯಾಗಿ ಏಳು ವರ್ಷವಾದರೂ ಅರ್ಕಾವತಿ ಬಡಾವಣೆ ಅಭಿವೃದ್ಧಿಪಡಿಸುವಲ್ಲಿ ಬಿಡಿಎ ವಿಫಲವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ನಿವೇಶನ ಹಸ್ತಾಂತರ ವಿಳಂಬ ಮಾಡಿದ್ದಕ್ಕೆ ಬಡ್ಡಿ ಸಮೇತ ₹12,43,792 ನೀಡಬೇಕು ಎಂದು ದೂರುದಾರರು ಬಿಡಿಎಗೆ ಸಲ್ಲಿಸಿದ್ದ ಜ್ಞಾಪನಾ ಪತ್ರವನ್ನು ಸಹ ರೇರಾಕ್ಕೆ ಹಾಜರುಪಡಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ರೇರಾ ಹಲವು ಬಾರಿ ಬಿಡಿಎಗೆ ನೋಟಿಸ್‌ ನೀಡಿತ್ತು. ನೋಟಿಸ್‌ಗೆ ವಿವರಣೆ ಸಹ ನೀಡಲಿಲ್ಲ ಹಾಗೂ ಹನ್ನೊಂದು ಬಾರಿ ನಡೆದ ವಿಚಾರಣೆಗೂ ಆಯುಕ್ತರು ಹಾಜರಾಗಿರಲಿಲ್ಲ.

‘ಸಾಕಷ್ಟು ಕಾಲಾವಕಾಶ ನೀಡಿದರೂ ಆದೇಶ ಪಾಲನೆ ಮಾಡುವಲ್ಲಿ ಬಿಡಿಎ ವಿಫಲವಾಗಿದೆ. ಬಿಡಿಎ ತಾನು ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲವಾಗಿರುವುದರಿಂದ ಬಡ್ಡಿಸಹಿತ ದೂರುದಾರರಿಗೆ ₹12,43,792 ಹಣ ಪಾವತಿಸಬೇಕು. ಆದೇಶ ಹೊರಡಿಸಿದ ದಿನಾಂಕದಿಂದ  60 ದಿನದೊಳಗೆ ದೂರುದಾರರಿಗೆ ದಂಡ ಪಾವತಿಸಬೇಕು’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ನಾನು ಖರೀದಿಸಿದ ನಿವೇಶನಕ್ಕೆ ಭೇಟಿ ನೀಡಲು ಮಾಡಿದ ಪ್ರಯತ್ನಗಳು ವ್ಯರ್ಥವಾಯಿತು. ಏಕೆಂದರೆ ಜಮೀನು ಕಳೆದುಕೊಂಡವರಿಗೆ ಪರಿಹಾರ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ನಿವೇಶನಕ್ಕೆ ಕಾಲಿಡಲು ಅವಕಾಶ ನೀಡಲಿಲ್ಲ. 2024ರ ಮಾರ್ಚ್‌ನಲ್ಲಿ ಸಮಸ್ಯೆ ಇತ್ಯರ್ಥಪಡಿಸಲಾಯಿತು. ಈಗ ನಿವೇಶನಕ್ಕೆ ಮುಕ್ತವಾಗಿ ಭೇಟಿ ನೀಡಬಹುದಾಗಿದೆ’ ಎಂದು ದೂರುದಾರ ಸುತಂತಿರಾಜ್ ತಿಳಿಸಿದರು.

‘ಅರ್ಕಾವತಿ ಬಡಾವಣೆಯ ಎಲ್ಲಾ 22 ಬ್ಲಾಕ್‌ಗಳು ಮೂಲಸೌಲಭ್ಯ ಕೊರತೆ ಎದುರಿಸುತ್ತಿವೆ. ಅದರಲ್ಲಿ 18ನೇ ಬ್ಲಾಕ್ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನೀರು ಅಥವಾ ವಿದ್ಯುತ್ ಸರಬರಾಜು ಪೂರೈಕೆ ಇಲ್ಲ. ಸರಿಯಾದ ಸಂಪರ್ಕ ರಸ್ತೆಗಳು ಇಲ್ಲ, ಡಾಂಬರು ಸಹ ಕಂಡಿಲ್ಲ’ ಎಂದು ಹೇಳಿದರು.

2003-2004 ರಲ್ಲಿ ಬೆಂಗಳೂರು ಪೂರ್ವ ಮತ್ತು ಯಲಹಂಕದ 16 ಗ್ರಾಮಗಳಲ್ಲಿ ಸಾವಿರಾರು ಎಕರೆ ಜಮೀನು  ಸ್ವಾಧೀನಪಡಿಸಿಕೊಂಡು ಅರ್ಕಾವತಿ ಬಡಾವಣೆ ನಿರ್ಮಿಸಿ, ಅದರಲ್ಲಿ 8,813 ನಿವೇಶನಗಳನ್ನು ರಚಿಸಲು ಉದ್ದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.