ADVERTISEMENT

ಮಕ್ಕಳನ್ನು ದೇಶದ ಆಸ್ತಿಯಾಗಿ ರೂಪಿಸಿ: ಸಿದ್ದರಾಮಾನಂದಪುರಿ ಸ್ವಾಮೀಜಿ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 20:33 IST
Last Updated 23 ಜುಲೈ 2023, 20:33 IST
ಕಾರ್ಯಕ್ರಮದಲ್ಲಿ ಎಚ್.ಎಂ. ರೇವಣ್ಣ ಅವರು ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು. ಕನಕಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ. ಬಳಗಾವಿ, ಸಿದ್ದರಾಮಾನಂದಪುರಿ ಸ್ವಾಮೀಜಿ ಇದ್ದಾರೆ.
ಕಾರ್ಯಕ್ರಮದಲ್ಲಿ ಎಚ್.ಎಂ. ರೇವಣ್ಣ ಅವರು ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು. ಕನಕಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ. ಬಳಗಾವಿ, ಸಿದ್ದರಾಮಾನಂದಪುರಿ ಸ್ವಾಮೀಜಿ ಇದ್ದಾರೆ.   

ಬೆಂಗಳೂರು: ‘ತಂದೆ–ತಾಯಿ ಮಕ್ಕಳನ್ನು ಆಸ್ತಿಗಷ್ಟೇ ವಾರಸುದಾರರನ್ನಾಗಿ ಮಾಡುವ ಬದಲಿಗೆ, ದೇಶದ ಆಸ್ತಿಯನ್ನಾಗಿ ರೂಪಿಸಬೇಕು’ ಎಂದು ತಿಂಥಣಿ ಬ್ರಿಡ್ಜ್‌ನಲ್ಲಿರುವ ಕಲಬುರಗಿ ವಿಭಾಗದ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕನಕಶ್ರೀ ಚಾರಿಟಬಲ್ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ, ಮಾತನಾಡಿದರು.

‘ಪೋಷಕರು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡಬೇಕೇ ಹೊರತು, ಜೀವನ ಪರ್ಯಂತ ಅವರಿಗೆ ಆಸರೆಯಾಗಿ ಇರಬಾರದು. ಮಕ್ಕಳು ತಮ್ಮ ಕಾಲಿನ ಮೇಲೆ ತಾವೇ ನಿಲ್ಲುವಂತೆ ಮಾಡಬೇಕು. ಆಗ ಅವರು ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅಸ್ತ್ರವಾಗಿಸಿಕೊಂಡಾಗ ಮಾತ್ರ ಅವಕಾಶಗಳು ದೊರೆಯುತ್ತವೆ’ ಎಂದು ಹೇಳಿದರು. 

ADVERTISEMENT

ಮಾಜಿ ಸಚಿವ ಎಚ್.ಎಂ. ರೇವಣ್ಣ, ‘ಮನುಷ್ಯ ಸಮಾಜಮುಖಿಯಾಗಿ ಇದ್ದಾಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಮಾಡಿ, ಉನ್ನತ ಸ್ಥಾನ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಆಂಧ್ರಪ್ರದೇಶದ ಅನಂತಪುರ ಲೋಕಸಭಾ ಸದಸ್ಯ ಗೋರಂಟ್ಲ ಮಾಧವ, ‘ವಿದ್ಯೆ ಎನ್ನುವುದು ಒಂದು ಉತ್ತಮ ಆಯುಧ. ಹೀಗಾಗಿ, ವಿದ್ಯಾವಂತರನ್ನು ಇಡೀ ಪ್ರಪಂಚ ಗೌರವಿಸುತ್ತದೆ’ ಎಂದು ಹೇಳಿದರು.

ಬೆಂಗಳೂರು ಕಂದಾಯ ವಿಭಾಗದ ಒಂಬತ್ತು ಜಿಲ್ಲೆಗಳ 200 ವಿದ್ಯಾರ್ಥಿಗಳಿಗೆ ‌ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಪದಕವನ್ನು ‌ನೀಡಿ ಪುರಸ್ಕರಿಸಲಾಯಿತು.

ಕನಕಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ. ಬಳಗಾವಿ, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವೆ ಪ್ರೊ. ಆರ್‌. ಸುನಂದಮ್ಮ, ನಿವೃತ್ತ ಐಆರ್‌ಎಸ್ ಅಧಿಕಾರಿ ಜೆ.ಪಿ.ಪ್ರಕಾಶ್, ಇನ್ಸೈಟ್ ಐಎಎಸ್‌ ಅಕಾಡೆಮಿ ನಿರ್ದೇಶಕ ವಿನಯ್ ಕುಮಾರ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.