ADVERTISEMENT

ಕನ್ನಡದಲ್ಲಿ ಬ್ಯಾಂಕ್‌ ವ್ಯವಹಾರ: ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 6:48 IST
Last Updated 7 ಜನವರಿ 2021, 6:48 IST
ಕನಕಪುರ ಕನ್ನಡ ಬಳಗದ ಸದಸ್ಯರು ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯ ಮುಂದೆ ಕನ್ನಡ ಭಾಷಾ ಬಳಕೆ ಕುರಿತು ಜಾಗೃತಿ ಮೂಡಿಸಿದರು
ಕನಕಪುರ ಕನ್ನಡ ಬಳಗದ ಸದಸ್ಯರು ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯ ಮುಂದೆ ಕನ್ನಡ ಭಾಷಾ ಬಳಕೆ ಕುರಿತು ಜಾಗೃತಿ ಮೂಡಿಸಿದರು   

ಬೆಂಗಳೂರು: ‘ಬ್ಯಾಂಕ್‌ ವ್ಯವಹಾರ ಕನ್ನಡದಲ್ಲಿ ನಡೆಯಬೇಕು’ ಎಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ಬುಧವಾರ ನಗರದ ಕನಕಪುರ ರಸ್ತೆಯ ವಿವಿಧ ಬ್ಯಾಂಕ್‌ಗಳ ಶಾಖಾ ಕಚೇರಿಗಳಲ್ಲಿ ನಡೆಯಿತು.

ಕನಕಪುರ ರಸ್ತೆ ಕನ್ನಡ ಬಳಗದ ಮುಖ್ಯಸ್ಥೆ ಭಾರ್ಗವಿ ಹೇಮಂತ್‌ ನೇತೃತ್ವದಲ್ಲಿ ಬಳಗದ ಕಾರ್ಯಕರ್ತರು ಕನ್ನಡ ಜಾಗೃತಿ ಫಲಕಗಳನ್ನು ಹಿಡಿದು ‘ಬ್ಯಾಂಕ್‌ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಗ್ರಾಹಕರೊಡನೆ ಕನ್ನಡದಲ್ಲಿ ಮಾತನಾಡಬೇಕು. ಕನ್ನಡದಲ್ಲೆ ಸೂಚನಾ ಫಲಕಗಳನ್ನು ಹಾಕಬೇಕು’ ಎಂದು ಮನವಿ ಮಾಡಿದರು.

‘ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ಉದ್ಯೋಗಗಳೂ ಕಡಿಮೆಯಾಗಿವೆ. ಬೇರೆ ರಾಜ್ಯದಿಂದ ಬಂದು ಇಲ್ಲಿ ಸ್ಥಾಪನೆಯಾದ ಬ್ಯಾಂಕ್‌ಗಳು ಆಯಾ ರಾಜ್ಯದವರನ್ನೇ ಆದ್ಯತೆ ಕೊಟ್ಟು ಉದ್ಯೋಗಕ್ಕೆ ನೇಮಿಸಿಕೊಳ್ಳುತ್ತವೆ. ಅವರು ಕನ್ನಡ ಮಾತನಾಡುವುದಿಲ್ಲ. ಬದಲಾಗಿ ತಮ್ಮ ನೆಲದ ಭಾಷೆಯನ್ನು ಮಾತನಾಡುತ್ತಾರೆ. ಇದರಿಂದಾಗಿ ಒಂದೆಡೆ ಕನ್ನಡಿಗರು ಅವಕಾಶ ವಂಚಿತರಾಗುತ್ತಿದ್ದಾರೆ. ಇನ್ನೊಂದೆಡೆ ಸಾಮಾನ್ಯ ಗ್ರಾಹಕರಿಗೆ ಸಂವಹನ ಸಮಸ್ಯೆ ಆಗುತ್ತಿದೆ. ಇದನ್ನು ಬ್ಯಾಂಕ್‌ ಆಡಳಿತಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಆದ್ದರಿಂದ ನಾವು ಖುದ್ದಾಗಿ ಬ್ಯಾಂಕ್‌ಗಳಿಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಭಾರ್ಗವಿ ಹೇಳಿದರು.

ADVERTISEMENT

ಕನಕಪುರ ರಸ್ತೆಯ ಸೆಂಟ್ರಲ್ ಬ್ಯಾಂಕ್, ಎಚ್‌ಡಿಫ್‌ಸಿ ಬ್ಯಾಂಕ್‌ನಲ್ಲಿ ಜಾಗೃತಿ ಮೂಡಿಸಲಾಯಿತು. ದಿವ್ಯಾ, ದಿಲೀಪ್, ಡಾ.ಲಲ್ಲು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.