ADVERTISEMENT

ಬಹರೇನ್‌ನಲ್ಲಿ ಕನ್ನಡ ಭವನ ಉದ್ಘಾಟನೆಗೆ ಸಿದ್ಧ

₹ 11 ಕೋಟಿ ವೆಚ್ಚದಲ್ಲಿ ತಲೆಯೆತ್ತಿದ ಭವನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 20:32 IST
Last Updated 25 ಡಿಸೆಂಬರ್ 2020, 20:32 IST

ಬೆಂಗಳೂರು: ‘ರಾಜ್ಯ ಸರ್ಕಾರದ ನೆರವಿನಿಂದ ಬಹರೇನ್‌ನಲ್ಲಿ ಪ್ರಾರಂಭವಾಗಿದ್ದ ಕನ್ನಡ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇದು ಹೊರ ದೇಶದಲ್ಲಿನ ಮೊದಲ ಸ್ವಂತ ಕನ್ನಡ ಭವನ ಎಂಬ ಹಿರಿಮೆಗೆ ಭಾಜನವಾಗಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಿಳಿಸಿದೆ.

ಬಹರೇನ್ ಕನ್ನಡ ಭವನದ ಶಿಲಾನ್ಯಾಸವನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ನೆರವೇರಿಸಿದ್ದರು.₹ 11 ಕೋಟಿ ವೆಚ್ಚದಲ್ಲಿ ಈ ಭವನವನ್ನು ನಿರ್ಮಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ₹ 2 ಕೋಟಿ ನೆರವು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ₹ 25 ಲಕ್ಷ ನೆರವನ್ನು ನೀಡಿತ್ತು.

‘ಬಹರೇನ್‌ನಲ್ಲಿ ಅಲ್ಲಿನ ಕನ್ನಡಿಗರು ಸಂಘಟಿತಗೊಂಡು ಭವ್ಯವಾದ ಕನ್ನಡ ಭವನವನ್ನು ನಿರ್ಮಿಸಿದ್ದಾರೆ. ಎರಡು ವರ್ಷಗಳ ಹಿಂದೆ ಪರಿಷತ್ತು ಮೊದಲ ಬಾರಿಗೆ ಅಂತರರಾಷ್ಟ್ರೀಯ ಕನ್ನಡ ಸಮ್ಮೇಳನವನ್ನು ಅಲ್ಲಿ ನಡೆಸಿತ್ತು. ಕನ್ನಡ ಭವನದ ವೇದಿಕೆಗೆ ‘ಕನ್ನಡ ಸಾಹಿತ್ಯ ಪರಿಷತ್ ವೇದಿಕೆ’ ಎಂದು ಹೆಸರಿಸಬೇಕೆಂಬ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು. ಈ ಭವನದ ನಿರ್ಮಾಣಕ್ಕಾಗಿ ಏಳು ವರ್ಷ ಅಲ್ಲಿನ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಶ್ರಮಿಸಿದ್ದರು’ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ತಿಳಿಸಿದ್ದಾರೆ.

ADVERTISEMENT

‘ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತು ಅಗತ್ಯ ಸಹಕಾರ ನೀಡಿದೆ' ಎಂದು ಬಹರೇನ್ ಕನ್ನಡ ಸಂಘ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.